ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಗಡಿಯಲ್ಲಿ ಭಾರತ-ಪಾಕಿಸ್ತಾನದ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಭಾರತ ಸರ್ಕಾರವಂತೂ ಯಾವುದೇ ಕಾರ್ಯಾಚರಣೆ ಬೇಕಾದರೂ ಮಾಡಿ ಎಂದು ಭಾರತೀಯ ಸೇನಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಸಂಸದೆ ಪಲ್ವಾಶ ಮೊಹಮ್ಮದ್ ಜಾಯ್ ಖಾನ್ ಅವರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣದ ಕನಸು ವ್ಯಕ್ತಪಡಿಸಿದ್ದಾರೆ.
“ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೇ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಲಾಗುತ್ತದೆ. ಬಾಬ್ರಿ ಮಸೀದಿ ನಿರ್ಮಾಣಕ್ಕೆ ಪಾಕಿಸ್ತಾನದ ಸೈನಿಕರೇ ಮೊದಲ ಇಟ್ಟಿಗೆ ಇಡಲಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರೇ ಮೊದಲ ಆಜಾನ್ ಮೊಳಗಿಸಲಿದ್ದಾರೆ” ಎಂದು ಸಂಸತ್ತಿನಲ್ಲೇ ಪಲ್ವಾಶ ಮೊಹಮ್ಮದ್ ಜಾಯ್ ಖಾನ್ ಹೇಳಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಭಾರತದ ಸೇನೆಯ ಕುರಿತು ಮಾತನಾಡಿದ ಅವರು, “ಭಾರತವು ಪಾಕಿಸ್ತಾನದ ಮೇಲೆ ಬೆದರಿಕೆಯ ತಂತ್ರ ಪ್ರಯೋಗಿಸುತ್ತಿದೆ. ಆದರೆ, ಪಾಕಿಸ್ತಾನವನ್ನು ಸೋಲಿಸುತ್ತೇವೆ ಎಂಬ ಭಾರತದ ಕನಸು ನನಸಾಗುವುದಿಲ್ಲ. ಏಕೆಂದರೆ, ಭಾರತ ಸರ್ಕಾರ ದಾಳಿಗೆ ಆದೇಶಿಸಿದರೆ, ಸೇನೆಯಲ್ಲಿರುವ ಸಿಖ್ಖರು ಪಾಕಿಸ್ತಾನದ ಮೇಲೆ ದಾಳಿ ಮಾಡುವುದಿಲ್ಲ. ಪಾಕಿಸ್ತಾನವು ಸಿಖ್ಖರ ಪವಿತ್ರ ಗುರುನಾನಕರ ನೆಲವಾಗಿರುವ ಕಾರಣ ಸಿಖ್ಖರು ಪಾಕ್ ಮೇಲೆ ದಾಳಿ ಮಾಡುವುದಿಲ್ಲ” ಎಂದಿದ್ದಾರೆ.
ಭಾರತದ ವಿರುದ್ಧ ಪ್ರಚೋದನಕಾರಿಯಾಗಿ ಹೇಳಿಕೆ ನೀಡುವ ಪ್ರವೃತ್ತಿ ಇತ್ತೀಚೆಗೆ ಜಾಸ್ತಿಯಾಗಿದೆ. ಕೆಲ ದಿನಗಳ ಹಿಂದಷ್ಟೇ, ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಸಿಂಧೂ ನದಿಯಲ್ಲಿ ಭಾರತೀಯರ ರಕ್ತ ಹರಿಯಲಿದೆ” ಎಂದು ನಾಲಗೆ ಹರಿಬಿಟ್ಟಿದ್ದರು. ವಾಸ್ತವದಲ್ಲಿ, ಭಾರತದ ಸೈನಿಕರಿಗೆ ಹೆದರಿ ಪಾಕ್ ಸೈನಿಕರು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.