ಚಾಮರಾಜನಗರ: ಸಂಬಳ ನೀಡಿಲ್ಲವೆಂದು ಮನನೊಂದ ವಾಟರ್ಮ್ಯಾನ್ ಗ್ರಾ.ಪಂ. ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾದ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಸು ನಾಯಕ (65) ಮೃತ ದುರ್ದೈವಿ. ಮೃತರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಓಗಳಿಬ್ಬರ ಬಳಿಯೂ ವೇತನದ ಬೇಡಿಕೆಯಿಟ್ಟಾಗ ಗದರಿಸಿ ಕಳುಹಿಸುತ್ತಿದ್ದರೇ ಹೊರತು ವೇತನ ನೀಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ವಾಟರ್ಮ್ಯಾನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಿಗ್ಗೆ ಹೊಂಗನೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಬಳಿ ಬಂದಾಗ ವಾಟರ್ಮ್ಯಾನ್ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಕಳೆದ 27 ತಿಂಗಳುಗಳಿಂದ ಸಂಬಳ ಸಿಗದೆ ಚಿಕ್ಕಸು ಬೇಸತ್ತು ಹೋಗಿದ್ದರು. ಚಿಕ್ಕಸುವಿಗೆ ಮಕ್ಕಳಿದ್ದರೂ ಅವರಿಂದ ಆರ್ಥಿಕ ನೆರವೇನೂ ಸಿಗುತ್ತಿರಲಿಲ್ಲ. ಹೀಗಾಗಿ ತಮ್ಮ ಹೊಟ್ಟೆ ಪಾಡಿನ ಸಲುವಾಗಿ ಈ ಕೆಲಸ ಮಾಡಿಕೊಂಡಿದ್ದರು. ತಿಂಗಳ ಸಂಬಳ ಕೇವಲ 5 ಸಾವಿರ ರೂ.ಗಳಾದರೂ ಅದನ್ನು ಪಡೆಯಲೂ ಕಳೆದ 2 ವರ್ಷಗಳಿಂದ ಹರಸಾಹಸ ಮಾಡುವ ಪರಿಸ್ಥಿತಿ ಎದುರಾಗಿತ್ತು.



















