ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ಹಿನ್ನೆಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಹಲವಾರು ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ. ಆದರೆ, ಟ್ಯಾಂಕರ್ ಮಾಲೀಕರು ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಜಲಮಂಡಳಿ ಬ್ರೇಕ್ ಹಾಕಲು ಮುಂದಾಗಿದೆ.
ಬೇಸಿಗೆ ಕಾಲದಲ್ಲಿ ಅಧಿಕ ಹಣ ವಸೂಲಿ ಮಾಡುವ ಟ್ಯಾಂಕರ್ ಗಳಿಗೆ ಜಲ ಮಂಡಳಿ ಶಾಕ್ ನೀಡಿದೆ. ಉಪ್ಪಿನಿಂದ ಹಿಡಿದು ಸಕ್ಕರೆ ವರೆಗೆ ಎಲ್ಲವೂ ಆನ್ ಲೈನ್ ನಲ್ಲೇ ಮನೆ ಬಾಗಿಲಿಗೆ ಬರುವ ಕಾಲವಿದು. ಕೂತಲ್ಲೇ ಮೊಬೈಲ್ ಮೂಲಕ ಜಗತ್ತನ್ನು ನೋಡುವ ಜಮಾನ ಸೃಷ್ಟಿಯಾಗಿದೆ. ಹೀಗಾಗಿ ಜಲ ಮಂಡಳಿ ಕೂಡ ಅಂಥದ್ದೇ ಹಾದಿ ತುಳಿದಿದೆ.
ಬೇಸಿಗೆಯಲ್ಲಿನ ನೀರಿನ ಅಭಾವ ನೀಗಿಸಲು ಆನ್ ಲೈನ್ ನಲ್ಲಿ ಕಾವೇರಿ ನೀರು ಮಾರಾಟಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದೆ. ಕಾವೇರಿ ಸಂಚಾರಿ ಎಂಬ ಯೋಜನೆ ಅಡಿ ಮನೆ ಬಾಗಿಲಿಗೆ ಕಾವೇರಿ ನೀರು ಪೂರೈಸಲು ಮುಂದಾಗಿದೆ. ಆ್ಯಪ್ ಮೂಲಕ ಬೆಂಗಳೂರು ಜನರು ತಮಗೆ ಬೇಕಾದಷ್ಟು ನೀರನ್ನು ಮನೆಗೆ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಏನಿದು ಸಂಚಾರಿ ಕಾವೇರಿ?
- ಆ್ಯಪ್ ಆಧಾರಿತ ನೀರು ಪೂರೈಕೆ ಸೇವೆ
- ಆರ್ಡರ್ ನೀಡಿದರೆ ಮನೆ ಬಾಗಿಲಿಗೆ ನೇರ ನೀರು ಸರಬರಾಜು
- ಒಟ್ಟು 500ಕ್ಕೂ ಅಧಿಕ ಟ್ಯಾಂಕರ್ ಬಳಕೆ
- 4 ರಿಂದ 12 ಸಾವಿರ ಲೀಟರ್ ವರೆಗೆ ಏಕಕಾಲಕ್ಕೆ ಪೂರೈಕೆ
- ಇದಕ್ಕೆ ಆನ್ ಲೈನ್ ಅಥವಾ ನೇರವಾಗಿ ಹಣ ಪಾವತಿಗೆ ಅವಕಾಶ
- ಮಧ್ಯವರ್ತಿಗಳಿಲ್ಲ. ದುಬಾರಿ ಬೆಲೆಗೆ ಬ್ರೇಕ್
- ನೇರವಾಗಿ ಜಲಮಂಡಳಿಯಿಂದಲೇ ನೀರು ಖರೀದಿ
- ಜಲಮಂಡಳಿಯಿಂದ ರಿಯಾಯಿತಿ ದರ ನಿಗದಿ
- ಈ ಮೂಲಕ ಜನರಿಗೆ ಅನುಕೂಲ, ಮಾಫಿಯಾಗೆ ಕಡಿವಾಣ
ಕಾವೇರಿ ನೀರಿನ ದರ ಎಷ್ಟು? - 4000 ಲೀಟರ್ ಟ್ಯಾಂಕರ್ ಗೆ 660 ರೂ.
- 5000 ಲೀಟರ್ ಟ್ಯಾಂಕರ್ ಗೆ 700 ರೂ.
- 6000 ಲೀಟರ್ ಟ್ಯಾಂಕರ್ ಗೆ 740 ರೂ..
- 12,000 ಲೀಟರ್ ಟ್ಯಾಂಕರ್ ಗೆ 1,290 ರೂ.
ಈ ದರ ಆರಂಭಿಕ ಎರಡು ಕಿಲೋ ಮೀಟರ್ ವ್ಯಾಪ್ತಿಗೆ ಸೀಮಿತವಾಗಿದೆ. 4 ರಿಂದ 6 ಸಾವಿರ ಲೀಟರ್ ವರೆಗಿನ ಸ್ಲ್ಯಾಬ್ 2 ಕಿಲೋ ಮೀಟರ್ ನಂತರದ ಪ್ರತಿ ಕಿಲೋ ಮೀಟರ್ 50 ರೂ. ಹೆಚ್ಚಳವಾಗಲಿದೆ. 12 ಸಾವಿರ ಹಾಗೂ ಅಧಕ್ಕೂ ಮೇಲ್ಪಟ್ಟ ಸ್ಲ್ಯಾಬ್ ಗೆ 2 ಕಿಲೋ ಮೀಟರ್ ನಂತರದ ಪ್ರತಿ ಕಿಲೋ ಮೀಟರ್ ಗೆ 70 ರೂ. ನಿಗದಿಯಾಗಿದೆ.