ಬೆಂಗಳೂರು: ರಾಜ್ಯ ಸರ್ಕಾರದ ಹೆಚ್ಚಿನ ಸೇವೆಗಳು ಈಗ ಆನ್ ಲೈನ್ ನಲ್ಲೇ ಲಭ್ಯವಾಗಿವೆ. ಇವುಗಳಲ್ಲಿ ಮನೆಗೆ ನೀರಿನ ಸಂಪರ್ಕ ಕಲ್ಪಿಸುವುದೂ ಸೇರಿದೆ. ಮನೆಯಲ್ಲೇ ಕುಳಿತು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮನೆಗೆ ನೀರಿನ ಸಂಪರ್ಕ ಪಡೆಯಬಹುದಾಗಿದೆ. ಈ ಸೇವೆಯು ಸೇವಾಸಿಂಧು ಯೋಜನೆಯಡಿಯಲ್ಲಿದ್ದು, ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನಾಗರಿಕರು ತಮಗೆ ನೀರು ಪೂರೈಕೆಯ ಹೊಸ ಲೈನ್ ಸಂಪರ್ಕ ಬೇಕಾಗಿದ್ದರೆ, ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.
ಸೇವಾ ಸಿಂಧು ಎಂದರೇನು?
ಸೇವಾಸಿಂಧು ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಿದ್ದು, ಎಲ್ಲಾ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿಒದಗಿಸಲು ಕಾರ್ಯನಿರ್ವಹಿಸುತ್ತದೆ. ಇದು ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದೆ. ಇ-ಆಡಳಿತ ಕೇಂದ್ರದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿಯಲ್ಲಿ ಬರುತ್ತದೆ.
sevasindhuservices.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಒಟಿಪಿ ಮೂಲಕ ಲಾಗಿನ್ ಮಾಡಿಕೊಲ್ಳಬೇಕು. ಆ ಮೂಲಕ ಸೇವಾಸಿಂಧು ಒದಗಿಸುವ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
- sevasindhuservices.karnataka.gov.in ಸೇವಾಸಿಂಧು ಜಾಲತಾಣಕ್ಕೆ ಭೇಟಿ ನೀಡಬೇಕು.
- ವರ್ಗವಾರು ಸೇವೆಗಳ ಮೇಲೆ ಕ್ಲಿಕ್ ಮಾಡಿ.
- ಕೈಗಾರಿಕೆ ಮತ್ತು ವಾಣಿಜ್ಯ ಎಂಬ ಆಯ್ಕೆಯನ್ನು ಆರಿಸಿ.
- ಅದರಲ್ಲಿ ಭೂಮಿ ಮತ್ತು ಕಟ್ಟಡ ಸಂಬಂಧಿತ ಸೇವೆಗಳನ್ನು ಕ್ಲಿಕ್ ಮಾಡಿ
- ನೀರು ಸರಬರಾಜು ಸಂಪರ್ಕಕ್ಕೆ ಅನುಮತಿ ಎಂಬ ಮೊದಲನೆ ಆಯ್ಕೆಯನ್ನು ಆರಿಸಿ.
- ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ