ಬೆಂಗಳೂರು: ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ.
ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಿವರಾಜ್ ತಂಗಡಗಿ, ರಾಹುಲ್ ಗಾಂಧಿ ಅವರು ವೋಟ್ ಕಳ್ಳತನ ಆಗಿದೆ ಎಂದು ಪ್ರೂವ್ ಮಾಡಿದ್ದಾರೆ. ಇಡೀ ದೇಶದಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಅವರು ಮೌನವಾಗಿ ಇದ್ದಾರೆ ಎಂದರೆ ಕಳ್ಳತನ ಆಗಿದೆ ಎಂದು ಅರ್ಥ. ಮೋದಿ, ಅಮಿತ್ ಶಾ ಯಾಕೆ ಹೇಳಿಕೆ ಕೊಡುತಿಲ್ಲ? ಚುನಾವಣೆ ಆಯೋಗ ಯಾಕೆ ಉತ್ತರ ಕೊಡಬೇಕು? ದೇಶ ಆಳುವವರು ಉತ್ತರ ಕೊಡಬೇಕು. ಇವರ ವರ್ತನೆ ನೋಡಿದರೆ ಮತ ಕಳ್ಳತನ ಆಗಿರುವುದು ಸತ್ಯ. ಬಿಜೆಪಿ ಅವರು ಕಳ್ಳತನ ಮಾಡಿಯೇ ಹಿಂದೆಲ್ಲಾ ಸರ್ಕಾರ ಮಾಡಿರುವುದು ಎಂದು ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.
ಸಮೀಕ್ಷೆಯಲ್ಲಿ ಮತಾಂತರ ವಿಚಾರದಲ್ಲಿ ಗೊಂದಲ ಆಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ನಾಯಕರಿಗೆ ಮಾತ್ರ ಗೊಂದಲ ಇರುವುದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಜನರು 22 ರಂದು ಮಾಹಿತಿ ಬರೆಸುವುದಕ್ಕೆ ಕಾಯುತ್ತಿದ್ದಾರೆ. ಈ ಸಮೀಕ್ಷೆ ಅದರೆ ಬಡವರಿಗೆ ಸಿದ್ದರಾಮಯ್ಯ ಯೋಜನೆ ಮಾಡತ್ತಾರೆ ಎಂದು ಬಿಜೆಪಿ ಅವರಿಗೆ ಭಯ. ನಾವು ಯೋಜನೆ ಕೊಟ್ಟರೆ ಬಿಜೆಪಿ ಅಸ್ಥಿತ್ವ ಹೋಗುತ್ತದೆ ಎಂಬ ಭಯ ಇದೆ. ಹೀಗಾಗಿ, ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.