ಚಂಡೀಗಢ: ಪತ್ನಿ ಮಾಡಿದ ಎಡವಟ್ಟು ಈಗ ಪತಿಯನ್ನು ಅಮಾನತಿನ ಹಂತಕ್ಕೆ ತಂದು ನಿಲ್ಲಿಸಿದೆ. ಕಾನ್ಸ್ಟೇಬಲ್ವೊಬ್ಬರ ಪತ್ನಿ ರಸ್ತೆ ಮಧ್ಯೆ ಡಾನ್ಸ್ ಮಾಡಿದ ತಪ್ಪಿಗೆ, ಪತಿ ಸಸ್ಪೆಂಡ್ ಆಗಿದ್ದಾರೆ. ಚಂಡೀಗಡದ ಸೆಕ್ಟರ್ -20 ಗುರುದ್ವಾರ ಚೌಕ್ನ ಜೀಬ್ರಾ ಕ್ರಾಸಿಂಗ್ನಲ್ಲಿ ಜ್ಯೋತಿ ಎಂಬ ಮಹಿಳೆಯು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದ್ದು, ಇದರ ಬೆನ್ನಲ್ಲೇ ಜ್ಯೋತಿ ಅವರ ಪತಿ, ಹಿರಿಯ ಕಾನ್ಸ್ಟೇಬಲ್ ಅಜಯ್ ಕುಂಡು ಅವರನ್ನು ಅಮಾನತುಗೊಳಿಸಿ ಚಂಡೀಗಢ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಸಂಜೆ 4:30ರ ಸುಮಾರಿಗೆ ತನ್ನ ಅತ್ತಿಗೆ ಪೂಜಾರೊಂದಿಗೆ ಜ್ಯೋತಿ ದೇವಸ್ಥಾನವೊಂದಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ರಸ್ತೆ ಮಧ್ಯೆಯ ನೃತ್ಯ ಮಾಡಿ ರೀಲ್ಸ್ ಮಾಡಿಕೊಂಡಿದ್ದರು. ಜ್ಯೋತಿ ಡಾನ್ಸ್ ಮಾಡುವ ವಿಡಿಯೋವನ್ನು ಅತ್ತಿಗೆ ಪೂಜಾ ರೆಕಾರ್ಡ್ ಮಾಡಿ, ಇಬ್ಬರೂ ಸೇರಿ ರೀಲ್ಸ್ ಅನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಜ್ಯೋತಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಕಾರಣ ಸಂಚಾರಕ್ಕೆ ಅಡ್ಡಿಯುಂಟಾಗಿ, ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಆದರೆ ಟ್ರಾಫಿಕ್ ಜಾಮ್ ಅನ್ನೂ ಲೆಕ್ಕಿಸದೆ ಜನಪ್ರಿಯ ಹರ್ಯಾನ್ವಿ ಹಾಡಿಗೆ ಜ್ಯೋತಿ ನೃತ್ಯ ಮಾಡುತ್ತಿದ್ದುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಹೆಡ್ ಕಾನ್ಸ್ಟೇಬಲ್ ಜಸ್ಬೀರ್ ಎಂಬವರು ಚಂಡೀಗಢದ ಸೆಕ್ಟರ್ 34 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಎಸ್ಐ ಬಲ್ಜಿತ್ ಸಿಂಗ್ ನೇತೃತ್ವದ ತಂಡವು ಸೆಕ್ಟರ್ 20 ರ ಗುರುದ್ವಾರ ಚೌಕ್ ಮತ್ತು ಸೆಕ್ಟರ್ 17 ರ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾದ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದರು. ಅದರಂತೆ, ಬಿಎನ್ಎಸ್ ಸೆಕ್ಷನ್ 125, 292 ಮತ್ತು 3 (5) ಅಡಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಇಬ್ಬರೂ ಮಹಿಳೆಯರ ಮೇಲೆ ಎಫ್ಐಆರ್ ದಾಖಲಿಸಲಾಯಿತು.
ಈ ವಿಡಿಯೋವನ್ನು ಹಿರಿಯ ಕಾನ್ಸ್ಟೇಬಲ್ ಅಜಯ್ ಕುಂಡು ಅವರ ಇನ್ಸ್ಟಾಗ್ರಾಂ ಖಾತೆಯಿಂದಲೇ ಅಪ್ಲೋಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಜ್ಯೋತಿ ಮತ್ತು ಪೂಜಾಗೆ ಜಾಮೀನು ಮಂಜೂರಾಗಿದೆ.
ಇದೇ ವೇಳೆ ಅಜಯ್ ಕುಂಡು ಅವರ ಅಮಾನತು ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಅನೇಕರು ಪೊಲೀಸ್ ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿದ್ದು, ಹೆಂಡತಿ ಮಾಡಿದ ತಪ್ಪಿಗೆ ಗಂಡನಿಗೆ ಏಕೆ ಶಿಕ್ಷೆ, ಇದರಲ್ಲಿ ಕಾನ್ಸ್ಟೇಬಲ್ ಹೇಗೆ ಜವಾಬ್ದಾರನಾಗುತ್ತಾನೆ, ಸಂಚಾರಕ್ಕೆ ಅಡ್ಡಿಪಡಿಸಿದ್ದು ಪತ್ನಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು, “ಅಮಾನತುಗೊಳಿಸಿರುವುದು ತಪ್ಪು ನಿರ್ಧಾರ. ಆಕೆ ಮನರಂಜಿಸಿದ್ದಾಳೆಯೇ ಹೊರತು ಬೇರೇನೂ ಮಾಡಿಲ್ಲ” ಎಂದು ಬರೆದಿದ್ದಾರೆ. ಇನ್ನೊಬ್ಬರು “ರೀಲ್ಸ್ ಮಾಡುವುದು ಈಗ ವ್ಯಸನವಾಗಿಬಿಟ್ಟಿದೆ, ಜನರು ಇದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಉತ್ತಮ” ಎಂದಿದ್ದಾರೆ.