ತುಮಕೂರು: ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ರಾಜೇಂದ್ರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಐವರು ವಿರುದ್ಧ ಎಫ್ ಐಆರ್ ದಾಖಲಾಗಿದೆ. A1 ಸೋಮ ಅಲಿಯಾಸ್ ಜಯಪುರ ಸೋಮ, A2 ಭರತ್, A3 ಅಮಿತ್, A4 ಗುಂಡಾ, A5 ಯತೀಶ್ ಎಂಬುವವರ ಮೇಲೆ ದೂರು ದಾಖಲಾಗಿದೆ.
ಬಿಎನ್ ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೂಲದ ಪ್ರಭಲ ವ್ಯಕ್ತಿಗಳಿಂದ ನನ್ನ ಕೊಲೆಗೆ ಪಿತೂರಿ ನಡೆದಿದೆ. ಬೆಂಗಳೂರು ಮೂಲದ ಅನಾಮಧೇಯ ವ್ಯಕ್ತಿಗಳು ಕೊಲೆಗೆ ಸಂಚು ರೂಪಿಸಿದ್ದಾರೆ. 70 ಲಕ್ಷ ರೂ. ಗೆ ಸುಪಾರಿ ನೀಡಿದ್ದಾರೆ. 5 ಲಕ್ಷ ರೂಪಾಯಿ ಅಡ್ವಾನ್ ನೀಡಲಾಗಿತ್ತು. ಸುಪಾರಿ ತೆಗೆದುಕೊಂಡಿದ್ದ ಸೋಮ ಅಲಿಯಾಸ್ ಜಯಪುರ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ನಡೆಸಿದ ಸಂಭಾಷಣೆಯ ಆಡಿಯೋದಲ್ಲಿ ಈ ಐವರು ವ್ಯಕ್ತಿಗಳ ಹೆಸರು ಪ್ರಸ್ತಾಪವಾಗಿದೆ. ತುಮಕೂರಿನ ಶಿರಾಗೇಟ್ ಸಮೀಪದ ಫಾರ್ಮ್ ಹೌಸ್ ನಲ್ಲಿ ಆರೋಪಿಗಳು ಸಂಚು ರೂಪಿಸಿದ್ದಾರೆ. ಹಂತಕರು ಹತ್ಯೆಯ ಹಿನ್ನೆಲೆಯಲ್ಲಿ ನ. 15ರಂದು ಮನೆಗೆ ಬಂದಿದ್ದರು. ರಾಜೇಂದ್ರ ಮಗಳ ಬರ್ತ್ ಡೇಗೆ ಶಾಮಿಯಾನ ಹಾಕಲು ಕಾರ್ಮಿಕರ ಸೊಗಿನಲ್ಲಿ ಮನೆ ಪ್ರವೇಶಿಸಿದ್ದರು. ಕ್ಯಾತಸಂದ್ರ ಬಳಿ ಇರುವ ಮನೆಗೆ ಬಂದಿದ್ದರು. ಹತ್ಯೆ ಮಾಡಲು ಸಾಧ್ಯವಾಗದಿದ್ದಕ್ಕೆ ಕಾರಿಗೆ ಜಿಪಿಆರ್ ಎಸ್ ಆಳವಡಿಸಲು ಸಂಚು ರೂಪಿಸಿದ್ದರು.
ಹತ್ಯೆ ಮಾಡಲು ಶಸ್ತ್ರಾಸ್ತ್ರ ಗಳನ್ನ ಸಂಗ್ರಹಿಸಿದ್ದ ಹಂತಕರು, ಜೊತೆಗೆ ಕಾರನ್ನು ಖರೀದಿಸಿದ್ದರು. ಬೆಂಗಳೂರಿನ ಕಲಾಸಿಪಾಳ್ಯ, ಮಧುಗಿರಿಯಲ್ಲಿ ಕೂಡ ಹಿಂಬಾಲಿಸಿದ್ದರು. ರಾಜಕೀಯ ದ್ವೇಷ ಹೊಂದಿದವರು ಬೆದರಿಕೆ, ಒಳಸಂಚು, ಆಮಿಷ ಮಾರ್ಗದಿಂದ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ರಾಜೇಂದ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.