ಇಂಫಾಲ್: ಮಣಿಪುರದಲ್ಲಿ ಮೈತೇಯಿ ಸಮುದಾಯದ ಸಂಘಟನೆಯಾದ ಅರಂಬೈ ತೆಂಗೋಲ್ನ ನಾಯಕನೊಬ್ಬನ ಬಂಧನದ ಬಳಿಕ ಶನಿವಾರ ರಾತ್ರಿ ರಾಜ್ಯದ ಐದು ಕಣಿವೆ ಜಿಲ್ಲೆಗಳಲ್ಲಿ ಗಲಭೆಗಳು ಭುಗಿಲೆದ್ದಿವೆ. ಈ ಘಟನೆಯಿಂದ ಉಂಟಾದ ಉದ್ವಿಗ್ನತೆಯನ್ನು ತಡೆಯಲು ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಥೌಬಾಲ್, ಕಾಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಬಿಷ್ಣುಪುರ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಶನಿವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಮಣಿಪುರ ಪೊಲೀಸರ ಜಂಟಿ ತಂಡವು ಇಂಫಾಲ್ ಪಶ್ಚಿಮದ ಕ್ವಾಕಿತೆಲ್ನಲ್ಲಿ ಅರಂಬೈ ತೆಂಗೋಲ್ ಸಂಘಟನೆಯ ನಾಯಕ ಕಾನನ್ ಸಿಂಗ್ ಎಂಬವರನ್ನು ಬಂಧಿಸಿದೆ ಎಂದು ವರದಿಯಾಗಿದೆ. ಈ ಬಂಧನದ ಸುದ್ದಿ ಹರಡಿದ ಬಳಿಕ ಇಂಫಾಲ್ನ ಕ್ವಾಕಿತೆಲ್ ಮತ್ತು ಉರಿಪೋಕ್ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್ಗಳು ಮತ್ತು ಹಳೆಯ ಪೀಠೋಪಕರಣಗಳನ್ನು ಸುಡುವ ಮೂಲಕ ರಾತ್ರಿಯಿಡೀ ಪ್ರತಿಭಟನೆ ನಡೆಸಿ, ಗಲಭೆ ಆರಂಭಿಸಿಳಿದರು.
ಕೆಲವರು ಇಂಫಾಲ್ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದು, ಬಂಧಿತ ನಾಯಕನನ್ನು ರಾಜ್ಯದಿಂದ ಹೊರಗೆ ಕೊಂಡೊಯ್ಯಲಾಗುತ್ತಿದೆ ಎಂಬ ವದಂತಿಗೆ ಪ್ರತಿಕ್ರಿಯೆಯಾಗಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಕೆಲವು ಪ್ರತಿಭಟನಾಕಾರರು ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳುವ ಬೆದರಿಕೆಯನ್ನೂ ಹಾಕಿದರು.

ಗಲಭೆ ನಿಯಂತ್ರಣಕ್ಕೆ ಕ್ರಮ:
ಗಲಭೆಯನ್ನು ತಡೆಗಟ್ಟಲು ಮಣಿಪುರ ಸರ್ಕಾರವು ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷಪೂರಿತ ಸಂದೇಶಗಳು, ಚಿತ್ರಗಳು ಮತ್ತು ವಿಡಿಯೊಗಳು ಹರಡುವ ಆತಂಕವಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯದ ಗೃಹ ಇಲಾಖೆಯ ಕಮಿಷನರ್ ಎನ್. ಅಶೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ. ರಾಜಭವನಕ್ಕೆ ತೆರಳುವ ರಸ್ತೆಗಳಲ್ಲಿ ಕೇಂದ್ರೀಯ ಪಡೆಗಳ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸರ್ಕಾರ ಮತ್ತು ಭದ್ರತಾ ಪಡೆಗಳು ತೀವ್ರ ಪ್ರಯತ್ನಗಳನ್ನು ಮುಂದುವರಿಸಿವೆ.
10 ದಿನಗಳ ಬಂದ್ ಘೋಷಣೆ:
ಅರಂಬೈ ತೆಂಗೋಲ್ ಸಂಘಟನೆಯು ತಮ್ಮ ನಾಯಕನ ಬಂಧನಕ್ಕೆ ಪ್ರತಿಕ್ರಿಯೆಯಾಗಿ ಐದು ಕಣಿವೆ ಜಿಲ್ಲೆಗಳಲ್ಲಿ 10 ದಿನಗಳ ಸಂಪೂರ್ಣ ಶಟ್ಡೌನ್ ಘೋಷಿಸಿದೆ. ಆದರೆ, ಈ ಬಂದ್ ನಿಂದ ಮಾಧ್ಯಮ ಮತ್ತು ವೈದ್ಯಕೀಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದೆ. ಈ ಸಂಘಟನೆಯು ಮೂಲತಃ ಮೈತೇಯಿ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ರೂಪುಗೊಂಡಿದ್ದರೂ, 2023ರ ಮೇ 3ರಿಂದ ರಾಜ್ಯದಲ್ಲಿ ಭುಗಿಲೆದ್ದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ವಿವಾದಾತ್ಮಕ ಶಕ್ತಿಯಾಗಿ ಪರಿವರ್ತನೆಗೊಂಡಿದೆ.
ರಾಜಕೀಯ ಪ್ರತಿಕ್ರಿಯೆ:
ಗಲಭೆಯ ಸಂದರ್ಭದಲ್ಲಿ, ಬಿಜೆಪಿಯ ರಾಜ್ಯಸಭಾ ಸಂಸದ ಲೈಶೆಂಬಾ ಸನಾಜಾವೋಬಾ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಾವು ಶಾಂತಿಯನ್ನು ತರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಇಂತಹ ಕೃತ್ಯಗಳನ್ನು ಮಾಡಿದರೆ ಶಾಂತಿ ಹೇಗೆ ಸಾಧ್ಯ?” ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
2023ರ ಮೇ 3ರಿಂದ ಆರಂಭವಾದ ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರವು ಈವರೆಗೆ 260ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿದೆ.