ಬೆಂಗಳೂರು: ದುಡಿದು ತಿನ್ನುವ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿ, ಸಣ್ಣ ಉದ್ದಿಮೆದಾರರ ಮೇಲೆ ದೌರ್ಜನ್ಯ ನಡೆಯುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರ್ ಸಾರಥ್ಯದಲ್ಲಿ ನಡೆದ “ಶ್ರಮಿಕರ ಸಂವಾದ ಸಭೆ”ಯಲ್ಲಿ ಮಾತನಾಡಿದ ಅವರು, ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ. ಬೇಕರಿ ಕಾಂಡಿಮೆಂಟ್ಸ್, ಬೀಡ ಅಂಗಡಿ ಹಾಗೂ ಸಣ್ಣ ಉದ್ದಿಮೆದಾರರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಬಿಬಿಎಂಪಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದು ಕಾಂಡಿಮೆಂಟ್ಸ್, ಬೀಡ ಅಂಗಡಿ ಹಾಗೂ ಸಣ್ಣ ಉದ್ದಿಮೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುತ್ತೇವೆ ಎಂದರು.
ಇದಕ್ಕೂ ಮುನ್ನ ಸಂವಾದದಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು. ಬಿಬಿಎಂಪಿ ಅಧಿಕಾರಿಗಳು ಬೇಕರಿಗಳ ಮೇಲೆ ದಾಳಿ ಮಾಡಿ ಗರಿಷ್ಠ 25 ಸಾವಿರ ರೂ. ವರೆಗೆ ದಂಡ ವಿಧಿಸುತ್ತಿದ್ದಾರೆ. ಮರಿ ಪುಡಾರಿ ರೌಡಿಗಳ ಉಪಟಳವೂ ಹೆಚ್ಚಾಗಿದೆ. ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಮ್ಮ ಮೇಲೆ ದರ್ಪ, ದೌರ್ಜನ್ಯ ತೋರುತ್ತಿದ್ದಾರೆ. ಸರ್ಕಾರ ನಮಗೆ ರಕ್ಷಣೆ ನೀಡದಿದ್ದರೆ ನಾವು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರುಮೆ ಮಾತನಾಡಿ, ನಾನೂ ಕೂಡ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡು ಬೆಳೆದು ಬಂದವನು. ನನಗೆ ಈ ಉದ್ಯಮದಲ್ಲಿ 30 ವರ್ಷಗಳ ಕಹಿ ಅನುಭವವಿದೆ. ಬೇಕರಿ, ಹೋಟೆಲ್ ಗಳು, ಬೀಡಾ ಅಂಗಡಿಗಳನ್ನು ಹೆಚ್ಚಾಗಿ ಕರಾವಳಿ ಭಾಗದವರು ನಡೆಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಮುಂದಿನ ವಿಧಾನಮಂಡಲ ಅಧಿವೇಶದನಲ್ಲಿ ಪ್ರಸ್ತಾಪಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ಹೇಳಿದರು.
ಶ್ರಮಿಕರ ನೇರ ಸಂವಾದ” ಕಾರ್ಯಕ್ರಮದಲ್ಲಿ ಸಂತೋಷ ಗುರೂಜಿ, ಹಿರಿಯ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ, ಸಮತಾ ಸೈನಿಕದಳ ವೆಂಕಟಸ್ವಾಮಿ ಏನ್, ಆರ್ ರಮೇಶ್, ಚಾಲಕರ ಸಂಘಟನೆಯಿಂದ ಗಂಡಸಿ ಸದಾನಂದ ಸ್ವಾಮಿ, ಬೆಂಗಳೂರು ಹೋಟೆಲ್ ಸಂಘದ ಗೌ, ಅಧ್ಯಕ್ಷರು ಪಿ ಸಿ ರಾವ್, ಮಧುಕರ್ ಶೆಟ್ಟಿ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.