ಬೆಳಗಾವಿ: ಬಿ.ವೈ. ವಿಜಯೇಂದ್ರ ಭ್ರಷ್ಟ. ಆತನನ್ನು ನಾನು ರಾಜ್ಯಾಧ್ಯಕ್ಷನಾಗಿ ಒಪ್ಪಿಕೊಳ್ಳುವುದಿಲ್ಲ. ಆತ ಪಕ್ಷದಲ್ಲಿ ತುಂಬಾ ಜ್ಯೂನಿಯರ್ ಎಂದು ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅಧ್ಯಕ್ಷ ಆಗಿರುವುದಕ್ಕೆ ನಮ್ಮ ವಿರೋಧವಿದೆ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ಆತನ ಮೇಲಿದೆ. ಆತನಿಗೆ ಯಾವ ಐಡಿಯಾಲಜಿ ಇಲ್ಲ. ಹಾಗಂತ ನಾನು ಯಡಿಯೂರಪ್ಪ ಅವರ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಅವರ ಬಗ್ಗೆ ನನಗೆ ಗೌರವವಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳುವ ಮೂಲಕ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಆರೆಸ್ಸೆಸ್ ಮುಖಂಡರ ಸಭೆಯಲ್ಲಿ ತಪ್ಪು ಮಾಡಿದವರನ್ನು ನಾಯಕರು ಬೈದಿದ್ದಾರೆ. ಬಿಜೆಪಿಯನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸುವಂತೆ ಮನವಿ ಮಾಡಿದ್ದೇವೆ. ಹೀಗಾಗಿ ವರಿಷ್ಠರು ಕೂಡ ಎಲ್ಲರಿಗೂ ಟಾಸ್ಕ್ ನೀಡಿದ್ದಾರೆ. ಎಲ್ಲರೂ ಕೆಲಸ ಮಾಡುತ್ತಿದ್ದೇವೆ. 120 ರಿಂದ 130 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ನೀಡಿದ ಟಾಸ್ಕ್ ನಲ್ಲಿ ನಾನು ವಿಫಲನಾದರೆ ನನ್ನನ್ನು ಒದ್ದು ಹೊರಹಾಕಿ ಎಂದು ಸಂಘ ಪರಿವಾರದ ಪ್ರಮುಖರ ಸಭೆಯಲ್ಲಿ ಹೇಳಿದ್ದೇನೆ ಎಂದಿದ್ದಾರೆ.
ಅನಂತ್ ಕುಮಾರ್ ಸಾವನ್ನಪ್ಪಿದ ನಂತರ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕರಾಗಿ ಬೆಳೆದಿಲ್ಲ. ಬಿಜೆಪಿಯನ್ನು ಒಬ್ಬರ ಕೈಯಲ್ಲಿ ನೀಡುವುದು ಬೇಡ. ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್ ಮೇಲೆ ಕೂತರೆ ಸರ್ವಾಧಿಕಾರ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.