ಧಾರವಾಡ: ಹಿರಿಯ ಸಾಹಿತಿ, ಪ್ರಕಾಶಕ ಡಾ. ರಮಾಕಾಂತ ಜೋಶಿ (89) ಇಹಲೋಕ ತ್ಯಜಿಸಿದ್ದಾರೆ. ಮನೋಹರ ಗ್ರಂಥಮಾಲಾ ಸಂಪಾದಕ, ವ್ಯವಸ್ಥಾಪಕಾಗಿದ್ದ ಜೋಶಿ ಕಿಟೆಲ್ ಕಾಲೇಜ್ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಗ್ರಂಥಗಳ ಸಂಪಾದನೆ, ರಚನೆ, ಇಂಗ್ಲಿಷ್ನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದರು.
ಮನೋಹರ ಗ್ರಂಥಮಾಲಾ ಸ್ಥಾಪಕ ಜಿ.ಬಿ. ಜೋಶಿ ಅವರ ಮಗ ಡಾ. ರಮಾಕಾಂತ ಜೋಶಿ ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪದವಿ ಪಡೆದಿದ್ದರು. ರಮಾಕಾಂತ ಜೋಶಿ ಅವರು, ಇಂಗ್ಲಿಷ್ ನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಅದು ಪ್ರಮುಖ ಕೃತಿಯಾಗಿದೆ.
ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ‘ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಆಳ್ವಾ ನುಡಿಸಿರಿ’ ಪ್ರಶಸ್ತಿ, ‘ಕನಕದಾಸ ಪ್ರಶಸ್ತಿ’, ಕನ್ನಡ ಪುಸ್ತಕ ಪ್ರಾಧಿಕಾರದ 2007 ರ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.