ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಸಿನಿಮಾ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆ ಗಳಿಸಿ ಮುನ್ನಗ್ಗುತ್ತಿದೆ.
ರವಿ ಬಸ್ರೂರು ಸಂಗೀತ ನಿರ್ದೇಶನದೊಂದಿಗೆ ಆಗಾಗ ಸಿನಿಮಾದತ್ತಲೂ ಗಮನ ಹರಿಸಿ, ಯಶಸ್ವಿಯಾಗಿದ್ದಾರೆ. ಹಿಂದೆ ‘ಗಿರ್ಮಿಟ್’ ಸಿನಿಮಾ ಮಾಡಿದ್ದರು. ಈಗ ಯಕ್ಷಗಾನ ಪ್ರಸಂಗವನ್ನೇ ತೆರೆಯ ಮೇಲೆ ತಂದಿದ್ದಾರೆ. ವೀರ ಚಂದ್ರಹಾಸದ ಮೂಲಕ ಈಗ ಮತ್ತೆ ಕ್ಯಾಪ್ ತೊಟ್ಟಿದ್ದಾರೆ.
ಹಿಂದೆ ಮುಂದೆ ಯಾರೂ ಇಲ್ಲದ ಚಂದ್ರಹಾಸ ಎಂಬ ಬಾಲಕ ರಾಜನಾಗುತ್ತಾನೆ ಎಂಬ ವಿಷಯ ದುಷ್ಟಬುದ್ಧಿಗೆ ತಿಳಿಯುತ್ತದೆ. ಕುಂತಲ ಸಾಮ್ರಾಜ್ಯದ ಯುವರಾಣಿ ವರಿಸಿ, ಬಳಿಕ ಆ ಸಾಮ್ರಾಜ್ಯಕ್ಕೆ ಚಂದ್ರಹಾಸ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿ ಕೇಳಿ ಆತ ಹೊಟ್ಟೆಕಿಚ್ಚಿನಿಂದಿ ಕುದಿಯುತ್ತಾನೆ. ಕೊಲೆಗೂ ಯತ್ನಿಸುತ್ತಾನೆ.
ಚಿಕ್ಕವನಿದ್ದ ಬಾಲಕ ಆನಂತರ ದೊಡ್ಡವನಾಗಿ ದುಷ್ಟಬುದ್ಧಿ ಎದುರು ಬರುತ್ತಾನೆ. ಆಗ ದುಷ್ಟಬುದ್ಧಿ ತಮ್ಮ ತನ್ನ ಕಪಟ ಮನಸ್ಥಿತಿ ತೋರಿಸಲು ಮುಂದಾಗುತ್ತಾನೆ. ಆನಂತರದ್ದೇ ಕಥೆ. ಈ ಕಥೆಯನ್ನು ಕರುನಾಡಿನ ಹೆಮ್ಮೆಯ ಕಲೆ ಯಕ್ಷಗಾನದ ಮೂಲಕ ರವಿ ಬಸ್ರೂರು ತೋರಿಸಿದ್ದಾರೆ.
ತೆರೆಯ ಮೇಲೆ ಬರುವ ಕಲಾವಿದರು ಕೂಡ ಯಕ್ಷಗಾನ ಶೈಲಿಯಲ್ಲೇ ಮಾತನಾಡುತ್ತಾರೆ. ವೇಷಭೂಷಣ ಎಲ್ಲವೂ ಅದೇ ರೀತಿ ಇದೆ. ಚಂದ್ರಹಾಸ, ದುಷ್ಟಬುದ್ಧಿ ಪಾತ್ರ ಜನರನ್ನು ಬಹುವಾಗಿ ಸೆಳೆದಿವೆ. ಯಕ್ಷಗಾನ ಪ್ರಸಂಗಗಳು ಕರಾವಳಿ ಜನರಿಗೆ ತುಂಬಾ ಪ್ರಿಯ ಹಾಗೂ ಇಷ್ಟ. ಚಿಕ್ಕಂದಿನಿಂದಲೂ ಯಕ್ಷಗಾನ ಕಲೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು, ಅದನ್ನು ಅರಿತಿರುವ ರವಿ ಬಸ್ರೂರು, ಯಕ್ಷಗಾನದ ಮೂಲಕ ಪದ್ಯಗಳು, ರಂಗ ಗೀತೆಗಳನ್ನು ಸೊಗಸಾಗಿ ತೋರಿಸಿದ್ದಾರೆ. ಹಿನ್ನೆಲೆ ಸಂಗೀತ, ಪದ್ಯಗಳು ಜನರಿಗೆ ತುಂಬಾ ಇಷ್ಟವಾಗಿವೆ.
ನಟ ಶಿವರಾಜ್ ಕುಮಾರ್ ಯಕ್ಷಗಾನ ವೇಷ ಧರಿಸಿರುವುದು ತೂಕ ನೀಡಿದೆ ಹಾಗೂ ಜನ ಅದನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಇನ್ನುಳಿದಂತೆ ಹಲವರು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಚಂದ್ರಹಾಸನ ಪಾತ್ರದಲ್ಲಿ ಶಿಥಿಲ್ ಶೆಟ್ಟಿ ಮನೋಜ್ಞವಾಗಿ ಕಾಣಿಸಿಕೊಂಡಿದ್ದಾರೆ. ದುಷ್ಟಬುದ್ಧಿ ಪಾತ್ರ ನಿರ್ವಹಿಸಿರುವ ನಟ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಜನರಿಗೆ ಇಷ್ಟವಾಗಿದ್ದಾರೆ. ಮದನ ಪಾತ್ರಧಾರಿ ಉದಯ ಹೆಗಡೆ ಕಾಡಬಾಳ್ ಜನರು ನಗೆಗಡಲಲ್ಲಿ ತೇಲಿಸಿದ್ದಾರೆ. ಇನ್ನುಳಿದಂತೆ ಪಾತ್ರಧಾರಿಗಳ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಚಿತ್ರಮಂದಿರದಿಂದ ಖುಷಿಯಿಂದ ಸಾಗುತ್ತಿದ್ದಾರೆ. ಈ ಮೂಲಕ ರವಿ ಬಸ್ರೂರು ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಜನಮಾನಸದಿಂದ ಅಳೆದು, ನಶಿಸಿ ಹೋಗುತ್ತಿರುವ ಕಲೆಗಳಿಗೆ ಜೀವ ತುಂಬುವ ಕಾರ್ಯಕ್ಕೆ ಈ ಮೂಲಕ ರವಿ ಬಸ್ರೂರು ಮುನ್ನುಡಿ ಬರೆದಿದ್ದಾರೆ ಎಂದರೆ ತಪ್ಪಾಗಲಾರದು.