ಬೆಂಗಳೂರು: ಇಸ್ರೇಲ್-ಇರಾನ್ (Israel-Iran) ಮಧ್ಯೆ ಭೀಕರ ಯುದ್ಧ ನಡೆಯುತ್ತಿದ್ದು, ಭಾರತವು ಇರಾನ್ ಪರ ಇರುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿಗಳು ನಡೆಯುತ್ತಿದ್ದರೂ ಭಾರತ ಯಾರ ಪರವಾಗಿ ನಿಂತಿಲ್ಲ. ತಟಸ್ಥ ನಿಲುವು ತಳೆದಿದೆ. ಹೀಗಾಗಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonnia Gandhi) ಅವರ ಬರಹವನ್ನು ಹಂಚಿ ಇರಾನ್ ಪರ ನಿಲ್ಲುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಸ್ರೇಲ್ ದೇಶವು ಇರಾನ್ ಮೇಲೆ ಅಪಾಯಕಾರಿ ದಾಳಿ ನಡೆಸುತ್ತಿದೆ. ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿದೆ.
ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುವುದನ್ನು ಹೇಳುತ್ತದೆ. ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಮಯದಲ್ಲಿ ಇರಾನ್ ಭಾರತದ ಪರವಾಗಿ ನಿಂತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿದೆ. ಈ ಮೊದಲು ಗಾಜಾ ಈಗ ಇರಾನ್ ವಿಚಾರಲ್ಲಿ ಮೌನವಾಗಿರುವುದು ಶಾಂತಿ ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯ ನಿರ್ಗಮನವನ್ನು ಸೂಚಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಎರಡು ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಜಮ್ಮು ಕಾಶ್ಮೀರದ ವಿಚಾರ ಬಂದಾಗ ಇರಾನ್ ಮತ್ತು ಇಸ್ರೇಲ್ ಎರಡೂ ಭಾರತದ ಪರವಾಗಿಯೇ ನಿಂತಿವೆ. ಇರಾನ್ನಲ್ಲಿ ಭಾರತ ಛಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುತ್ತಿದ್ದರೆ ಇಸ್ರೇಲ್ ಜೊತೆ ಭಾರತ ಹಲವಾರು ರಕ್ಷಣಾ ಒಪ್ಪಂದಗಳ ಜೊತೆ ಸಹಿ ಹಾಕಿದೆ. ರಕ್ಷಣಾ ಸಾಮಾಗ್ರಿಗಳನ್ನು ಜಂಟಿಯಾಗಿ ಉತ್ಪಾದನೆ ಮಾಡುತ್ತಿದೆ. ಹೀಗಾಗಿ ಭಾರತ ಇಲ್ಲಿಯವರೆಗೆ ತನ್ನ ಬೆಂಬಲವನ್ನು ಯಾವುದೇ ದೇಶಕ್ಕೆ ನೀಡಿಲ್ಲ.