ಬೈಂದೂರಿನ ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಸಹಭಾಗಿತ್ವದೊಂದಿಗೆ ಏ. 21ರಿಂದ 27ರ ವರೆಗೆ ಅಂಡರ್- 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಬೈಂದೂರಿನ ಗಾಂಧಿ ಮೈದಾನದಲ್ಲಿ ವಿಕ್ರಂ ಟ್ರೋಫಿ ನಡೆಯಲಿದೆ. 1975ರಿಂದ ಈ ಟೂರ್ನಿ ಆಯೋಜನೆ ಮಾಡಲಾಗುತ್ತಿದೆ. ವಿಕ್ರಂ ಕ್ರಿಕೆಟ್ ಕ್ಲಬ್ ನಗದು ಬಹುಮಾನ ಒಳಗೊಂಡ ಟೂರ್ನಿ ಆಯೋಜಿಸಿದೆ. ಈ ಕ್ಲಬ್ ಈಗಾಗಲೇ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿ, ಹಲವಾರು ಪ್ರಶಸ್ತಿಗಳನ್ನು ಕೂಡ ಗೆದ್ದಿದೆ. ಇದರೊಂದಿಗೆ ಕ್ಲಬ್ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೂಡ ಗುರುತಿಸಿಕೊಂಡಿದೆ.
ವಿಕ್ರಂ ಕ್ರಿಕೆಟ್ ಕ್ಲಬ್ನ ಆಶ್ರಯದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿಯನ್ನು ಕಳೆದೆರಡು ವರ್ಷಗಳಿಂದ ಬೇಸಿಗೆ ಶಿಬಿರ ಹಾಗೂ ವರ್ಷಾವಧಿ ಶಿಬಿರಗಳ ಮೂಲಕ ಆಯೋಜಿಸಲಾಗುತ್ತಿದೆ. ಈ ಮೂಲಕ ಈ ಭಾಗದ ಹಲವಾರು ಯುವ ಆಟಗಾರರನ್ನು ಹುಟ್ಟು ಹಾಕುತ್ತಿದೆ. ಇದಕ್ಕೆ ಪೂರಕವಾಗಿ ಏ. 21ರಿಂದ 27ರ ತನಕ ಬೈಂದೂರು ಗಾಂಧಿ ಮೈದಾನದಲ್ಲಿ ಬೈಂದೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಂಡರ್ ನೈಂಟೀನ್ (19 ವರ್ಷದ ಕೆಳಗಿನವರ) ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಈ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು. ವಿಕ್ರಂ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದಿನೇಶ್ ಗಾಣಿಗ, ಗೌರವಾಧ್ಯಕ್ಷ ಗಿರೀಶ್ ಬೈಂದೂರು ನಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಕೆ. ನಾರಾಯಣ, ಗೌರವ ಸಲಹೆಗಾರ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ರಾಜೇಶ್ ಆಚಾರ್, ಖಜಾಂಚಿ ಸುನಿಲ್ ಬೈಂದೂರು, ಗಣೇಶ್ ಪರಮಾನಂದ ಸೇರಿದಂತೆ ಹಲವರು ಇದ್ದರು.