ನವದೆಹಲಿ : ಫೆಬ್ರವರಿ ೧೫ರಂದು ನಡೆಯಬೇಕಿರುವ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ೨೦ ವಿಶ್ವಕಪ್ ಪಂದ್ಯದ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಈ ನಡುವೆ ಕೊಲಂಬೊದಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ತಂಡವು ತನ್ನ ಮುಂದಿನ ಪಂದ್ಯದ ಮೇಲೆ ಮಾತ್ರ ಗಮನಹರಿಸುತ್ತಿದ್ದು, ಭಾರತದ ವಿರುದ್ಧದ ಪಂದ್ಯದ ವಿಷಯದಲ್ಲಿ ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದೆ ಎಂದು ಪಾಕ್ ವೇಗದ ಬೌಲರ್ ಸಲ್ಮಾನ್ ಮಿರ್ಜಾ ಹೇಳಿದ್ದಾರೆ.
ಮಂಗಳವಾರ (ಫೆ.10) ಅಮೆರಿಕ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂಡದ ಸಿದ್ಧತೆ ಮತ್ತು ಮನಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. “ನಾವು ಇಡೀ ವಿಶ್ವಕಪ್ ಟೂರ್ನಿಗಾಗಿ ತಯಾರಿ ನಡೆಸುತ್ತಿದ್ದೇವೆ. ನಮ್ಮ ಎದುರಾಳಿ ಯಾರು ಎಂಬುದನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ಆಡುತ್ತೇವೆ. ಇನ್ನು ಭಾರತದ ವಿರುದ್ಧದ ಪಂದ್ಯದ ವಿಚಾರಕ್ಕೆ ಬಂದರೆ, ಅದು ಸರ್ಕಾರದ ನಿರ್ಧಾರವಾಗಿರುತ್ತದೆ. ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಪಾಲಿಸುತ್ತೇವೆ,” ಎಂದು ಮಿರ್ಜಾ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ವಿರುದ್ಧದ ಕಾದಾಟಕ್ಕೆ ಸಜ್ಜು
ಸದ್ಯಕ್ಕೆ ಪಾಕಿಸ್ತಾನ ತಂಡದ ಸಂಪೂರ್ಣ ಗಮನ ಅಮೆರಿಕ ವಿರುದ್ಧದ ಪಂದ್ಯದ ಮೇಲಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿರುವ ಈ ಹಗಲು-ರಾತ್ರಿ ಪಂದ್ಯಕ್ಕೆ ತಂಡ ಸಜ್ಜಾಗಿದೆ. “ನಾವು ಒಂದೊಂದೇ ಪಂದ್ಯದ ಕಡೆಗೆ ಗಮನ ಹರಿಸುತ್ತಿದ್ದೇವೆ. 15ರ ಪಂದ್ಯದ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ. ಅಲ್ಲಿಯವರೆಗೆ ನಮ್ಮ ಮುಂದಿರುವ ಆಟದ ಮೇಲಷ್ಟೇ ನಮ್ಮ ಚಿತ್ತ,” ಎಂದು ನೆದರ್ಲ್ಯಾಂಡ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ನಸೀಮ್ ಶಾ ಬದಲಿಗೆ ಆಡಿ ಮೂರು ವಿಕೆಟ್ ಕಿತ್ತಿದ್ದ ಮಿರ್ಜಾ ಹೇಳಿದ್ದಾರೆ.
ಐಸಿಸಿ-ಪಿಸಿಬಿ ಮಾತುಕತೆ ಮತ್ತು ಬೇಡಿಕೆಗಳು
ಒಂದೆಡೆ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರೆ, ಇನ್ನೊಂದೆಡೆ ಲಾಹೋರ್ನಲ್ಲಿ ರಾಜತಾಂತ್ರಿಕ ಮಾತುಕತೆಗಳು ಜೋರಾಗಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಐಸಿಸಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಸಂಪರ್ಕಿಸಿದ್ದಾರೆ.
ಮೂಲಗಳ ಪ್ರಕಾರ, ಐಸಿಸಿ ಜೊತೆಗಿನ ಮಾತುಕತೆಯ ವೇಳೆ ಪಾಕಿಸ್ತಾನ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತ್ತು. ಇದರಲ್ಲಿ ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳಿಗೆ ಐಸಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ, ಭಾರತದೊಂದಿಗಿನ ದ್ವಿಪಕ್ಷೀಯ ಸರಣಿ ಮತ್ತು ತ್ರಿಕೋನ ಸರಣಿಯ ಪ್ರಸ್ತಾಪಗಳನ್ನು ತಿರಸ್ಕರಿಸಿದೆ. ದ್ವಿಪಕ್ಷೀಯ ಸರಣಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಬಾಂಗ್ಲಾ ಪರ ಪಾಕ್ ಬ್ಯಾಟಿಂಗ್
ವಿಶ್ವಕಪ್ನಿಂದ ಹೊರಗುಳಿದಿರುವ ಬಾಂಗ್ಲಾದೇಶಕ್ಕೆ ಐಸಿಸಿ ಆದಾಯದ ಪೂರ್ಣ ಪಾಲು ಸಿಗಬೇಕು ಮತ್ತು ಭವಿಷ್ಯದಲ್ಲಿ ಐಸಿಸಿ ಟೂರ್ನಿಯ ಆತಿಥ್ಯ ನೀಡಬೇಕು ಎಂಬ ಪಾಕಿಸ್ತಾನದ ಒತ್ತಾಯಕ್ಕೆ ಮನ್ನಣೆ ಸಿಕ್ಕಿದೆ. ಆದರೆ, ಭಾರತದ ವಿರುದ್ಧ ಆಡುವ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಸದ್ಯಕ್ಕೆ, ಮೈದಾನದಲ್ಲಿ ಆಟಗಾರರು ಬೆವರು ಹರಿಸುತ್ತಿದ್ದರೆ, ಮೈದಾನದ ಹೊರಗೆ ಕ್ರಿಕೆಟ್ ಮಂಡಳಿಗಳು ರಾಜತಾಂತ್ರಿಕ ಸಮರದಲ್ಲಿ ತೊಡಗಿವೆ.
ಇದನ್ನೂ ಓದಿ : ಹಿಮಂತ ‘ಪಾಯಿಂಟ್ ಬ್ಲಾಂಕ್ ಶಾಟ್’ ವಿಡಿಯೋ ವಿವಾದ | ಸುಪ್ರೀಂನಲ್ಲಿ ಚುನಾವಣೆ ಹೋರಾಟ ನಡೆಯುತ್ತಿದೆ ಎಂದ ಸಿಜೆಐ!



















