ಕುಂದಾಪುರ : ಕುಂದಾಪುರದ ಯಕ್ಷಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೆಹರು ಮೈದಾನ, ಹಲವು ವರ್ಷಗಳಿಂದ ತಾಲೂಕಿನ ಆಡಳಿತ ಸುಪರ್ದಿಯಲ್ಲಿದ್ದು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಪುರಸಭೆ ಆಡಳಿತದ ಸತತ ಪ್ರಯತ್ನದಿಂದ ತಾಲೂಕು ಪುರಸಭೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ.
ಕುಂದಾಪುರ ತಾಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ವರದಿಗಾರರೊಂದಿಗೆ ಮಾತನಾಡುತ್ತಾ, ನೆಹರು ಮೈದಾನದಲ್ಲಿ ಇಲ್ಲಿಯ ತನಕ ಯಾವುದೇ ಸ್ವಚ್ಛತೆ, ನೈರ್ಮಲ್ಯ, ಶೌಚಾಲಯ, ಬಯಲು ರಂಗ ಮಂಟಪ ಇನ್ನೂ ಹಲವು ವಿಷಯಗಳಿಗೆ ಕ್ರಮವಹಿಸದ ಪುರಸಭೆಯೂ ನೆಲಬಾಡಿಗೆ ಹೆಸರಿನಲ್ಲಿ ವಸೂಲಿಗೆ ಹೊರಟಿದೆ. ಈ ದಾರಿಯನ್ನು ಪುರಸಭೆ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಮೈದಾನದಲ್ಲಿ ಯಕ್ಷಗಾನ, ಇತರೆ ಸಾಂಸ್ಕೃತಿಕ, ಕಲೆ, ಕ್ರೀಡೆ ಹಾಗೂ ಕೃಷಿ ಮೇಳ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಹಾಗಾಗಿ ಇಲ್ಲಿ ನೆಲ ಬಾಡಿಗೆ ಹೆಸರಿನಲ್ಲಿ ಸುಮಾರು 50-60 ಸಾವಿರದ ತನಕ ಹಣ ವಸೂಲಿ ಮಾಡುತ್ತಾರೆ ಎಂಬ ವಿಚಾರ ತಿಳಿದುಬಂದಿದೆ. ಇದೊಂದು ಕಲಾಭಿಮಾನಿಗಳ, ಕ್ರೀಡಾ ಆಸಕ್ತರ, ಕೃಷಿಕರ ವಿರೋಧಿ ನಿಲುವಾಗಿದೆ. ಹಾಗಾಗಿ ಅವರಿಗೆ ನ್ಯಾಯ ಒದಗಿಸಲು ಕುಂದಾಪುರ ತಾಲ್ಲೂಕು ರೈತ ಸಂಘವು ಪುರಸಭೆ ಈ ಕ್ರಮವನ್ನು ವಿರೋಧಿಸಿ ಹೋರಾಟದ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : CCB ಪೊಲೀಸರ ಭರ್ಜರಿ ಬೇಟೆ | ಹೊಸ ವರ್ಷಕ್ಕೆ ತಂದಿದ್ದ 4.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ – ಮೂವರು ಪೆಡ್ಲರ್ಗಳ ಬಂಧನ



















