ಉಡುಪಿ: ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾರ್ಕಳದಲ್ಲಿ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಇನ್ ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಹಿಂದೂ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಮುಸ್ಲಿಂ ಯುವಕನೊಬ್ಬ ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್ ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾರೆ. ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹೇಳಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯಾಗಿರುವ ಯುವತಿಗೂ ಅತ್ಯಾಚಾರ ಮಾಡಿದ ಯುವಕನಿಗೂ ಮೂರು ತಿಂಗಳಿಂದ ಪರಿಚಯವಾಗಿತ್ತು. ಸಂತ್ರಸ್ತೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು. ಹೀಗಾಗಿ ಯುವತಿ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಆರೋಪಿಯ ಕಾರಿನಲ್ಲಿ ಬರಲು ಒಪ್ಪಿಕೊಂಡಿದ್ದಳು. ಆದರೆ, ಆತನ ಇಬ್ಬರು ಸ್ನೇಹಿತರು ಬಂದು ಬಿಯರ್ ನೀಡಿದ್ದರು. ಯುವತಿಗೆ ಬಿಯರ್ ನೀಡುವ ಮೊದಲೇ, ಡ್ರಗ್ಸ್ ಮಿಶ್ರಣ ಮಾಡಿ ಕೊಡಲಾಗಿದೆ. ಇದರಿಂದ ಬಿಯರ್ ಸೇವನೆ ಮಾಡುತ್ತಿದ್ದಂತೆಯೇ ಯುವತಿ ಮೂರ್ಚೆ ಹೋಗಿದ್ದಾಳೆ. ನಂತರ ಆಕೆ ಅಮಲಿನಲ್ಲಿರುವುದನ್ನು ದುರ್ಬಳಕೆ ಮಾಡಿಕೊಂಡು ಪಾಪಿ ಅತ್ಯಾಚಾರ ನಡೆಸಿದ್ದಾನೆ. ಆಂತರ ಸಂಜೆ ಅಮಲಿನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಮನೆಗೆ ಬಿಟ್ಟು ಹೋಗಿದ್ದಾರೆ. ಯುವತಿಯ ಸ್ಥಿತಿ ಕಂಡು ಮನೆಯವರು ವಿಚಾರಿಸಿದಾಗ ವಿಚಾರ ಬಾಯಿ ಬಿಟ್ಟಿದ್ದಾಳೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಹೇಳಿಕೆ ಕೊಡುವ ಸ್ಥಿತಿಯಲ್ಲಿಲ್ಲ. ಆದರೆ, ಯಾವ ಮಾದರಿಯ ಡ್ರಗ್ಸ್ ನೀಡಲಾಗಿದೆ ಎಂಬುವುದರ ಮಾಹಿತಿ ಇಲ್ಲ. ರಕ್ತ ಪರೀಕ್ಷೆಯ ವರದಿ ಬಂದ ನಂತರ ಮಾದಕ ವಸ್ತುವಿನ ಬಗ್ಗೆ ಮಾಹಿತಿ ತಿಳಿಯಲಿದೆ. ಆತ ಡ್ರಗ್ ಪೆಡ್ಲರ್ ಎಂಬುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಹಾಗಂತ ತಳ್ಳಿ ಹಾಕಲೂ ಸಾಧ್ಯವಿಲ್ಲ. ಆದರೆ, ಯುವತಿಯ ಪೋಷಕರ ದೂರಿನಂತೆ ಆತ ಅತ್ಯಾಚಾರ ಮಾಡಿದ್ದಾನೆ ಎಂಬುವುದು ತಿಳಿದಿದೆ.
ಇಬ್ಬರು ಬಿಯರ್ ತಂದುಕೊಡಲು ಸಹಕಾರ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ, ಆತನೊಂದಿಗೆ ಕಾರಿನಲ್ಲಿ ಬೇರೆ ಯಾರಾದರೂ ಹೋಗಿದ್ದರಾ, ಅತ್ಯಾಚಾರ ಮಾಡಿದ್ದರಾ ಎಂಬುವುದರ ಕುರಿತು ತನಿಖೆಯಾಗಬೇಕು. ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿದೆ ಎಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹೇಳಿದ್ದಾರೆ.