ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ದಲ್ಲಿ (Pahalgam) ಭಯೋತ್ಪಾದಕರ ದಾಳಿಗೆ 26 ಅಮಾಯಕರು ಬಲಿಯಾಗಿದ್ದಾರೆ. ಪ್ರತಿಯಾಗಿ ಭಾರತೀಯ ಸೇನೆ (Indian Army) ಪ್ರತೀಕಾರ ಪ್ರಾರಂಭಿಸಿದೆ. ಈ ಮೂಲಕ ಭಾರತೀಯ ಸೇನೆ ಮೊದಲ ಹೆಜ್ಜೆ ಇಟ್ಟಿದೆ.
ಪಹಲ್ಗಾಮ್ನ ದಾಳಿಯಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ಲಷ್ಕರ್-ಇ-ತೈಬಾ ಉಗ್ರ ಆಸೀಫ್ ಶೇಖ್ ಮತ್ತು ಆದಿಲ್ ಮನೆಗಳನ್ನು ಸೇನೆ ಉಡಾಯಿಸಿದೆ. ನಿನ್ನೆಯಷ್ಟೇ ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಮಾಯಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ರಣಬೇಟೆ ಆರಂಭಿಸಿದ ಸೇನೆ ಕಾಶ್ಮೀರದ (Kashmir) ಟ್ರಾಲ್ನಲ್ಲಿರುವ ಎಲ್ಇಟಿ ಭಯೋತ್ಪಾದಕ ಆಸಿಫ್ ಶೇಖ್ನ ಮನೆ, ಅನಂತ್ನಾಗ್ ಜಿಲ್ಲೆಯಲ್ಲಿರುವ ಆದಿಲ್ ಮನೆಯನ್ನು ಸ್ಫೋಟಿಸಿದೆ.
ಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶೇಖ್ ಭಾಗಿಯಾಗಿದ್ದಾನೆಂದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಶೇಖ್ ಮನೆ-ಆಸ್ತಿಯನ್ನು ನಾಶಪಡಿಸಿದ್ದಾರೆ. ಪಹಲ್ಗಾಮ್ನಲ್ಲಿ ಗುಂಡಿನ ಸುರಿಮಳೆ ಸುರಿಸಿ ಹಿಂದೂಗಳ ಹತ್ಯೆಗೈಯ್ದ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ. 5 ರಿಂದ 7 ಭಯೋತ್ಪಾದಕರು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದೆ.
ಅಮಾಯಕ 26 ಮಂದಿ ಹಿಂದೂಗಳ ಕಗ್ಗೊಲೆ ಮಾಡಿದ ಕಡುಪಾಪಿಗಳ ಹುಟ್ಟಡಗಿಸಲು ಭಾರತೀಯ ಸೇನೆ ಈಗ ಶಪಥ ಮಾಡಿ ಹೆಜ್ಜೆ ಇಟ್ಟಿದೆ.
ಬಂಡಿಪೋರಾ ಜಿಲ್ಲೆಯ ಬಾಜಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ಭದ್ರತಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಇಬ್ಬರು ಭದ್ರತಾಪಡೆ ಸಿಬ್ಬಂದಿಗೆ ಗಾಯಗಳಾಗಿವೆ. ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಗಿದೆ.



















