ಕೊಪ್ಪಳ: ಜಮೀನು ವಿವಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಡೆತ್ ನೋಟ್ ನಲ್ಲಿ ಕಾಂಗ್ರೆಸ್ ಮಾಜಿ ಸಚಿವರ ಹೆಸರು ಇರುವುದು ಪತ್ತೆಯಾಗಿದೆ.
ಜಮೀನು ವಿವಾದ, ರೈತರ ಸಾವು, ಡೆತ್ ನೊಟ್ ನಲ್ಲಿ ಕಾಂಗ್ರೆಸ್ ನ ಮಾಜಿ ಸಚಿವರ ಹೆಸರು ಥಳಕು ಹಾಕಿಕೊಂಡಿದ್ದು, ಲ್ಯಾಂಡ್ ಮಾಫಿಯಾ ಬಗ್ಗೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಚಿವರು ಕೇವಲ 25 ಸಾವಿರ ರೂಪಾಯಿ ಸಾಲಕ್ಕೆ ಬರೋಬ್ಬರಿ ನಾಲ್ಕು ಎಕ್ಕರೆ ಗುಳುಂ ಮಾಡಿದ್ರಾ? ಎಂಬ ಸಂಶಯ ಕೇಳಿ ಬರುತ್ತಿದೆ.
25 ಸಾವಿರ ಸಾಲ ನೀಡಿ ಕೋಟ್ಯಾಂತರ ಬೆಲೆ ಬಾಳುವ 4 ಎಕರೆ ಜಮೀನು ವಶಪಡಿಸಿಕೊಳ್ಳಲು ಮಾಜಿ ಸಚಿವ ಯತ್ನಿಸಿದ್ದಾರೆ ಎನ್ನಲಾಗಿದೆ. ಜಮೀನು ಗಲಾಟೆಯಲ್ಲಿ ಆಸ್ಪತ್ರೆ ಸೇರಿದ್ದ ರೈತ ಈರಪ್ಪ, ಸೋಮವಾರ ಸಾನ್ನಪ್ಪಿದ್ದು, ಡೆತ್ ನೋಟ್ ಪತ್ತೆಯಾಗಿದೆ.
ರೈತ ಬರೆದಿಟ್ಟ ಡೆತ್ ನೊಟ್ ನಲ್ಲಿ ಕಾಂಗ್ರೆಸ್ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹೆಸರು ಉಲ್ಲೇಖವಾಗಿದೆ. ಕೊಟ್ಟ ಸಾಲಕ್ಕೆ ದೌರ್ಜನ್ಯದಿಂದ ಭೂಮಿ ಕಸಿದುಕೊಂಡಿರುವ ಆರೋಪ ಕೇಳಿ ಬಂದಿದೆ. ಡೆತ್ ನೋಟ್ ನಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ನಾಲ್ವರ ಹೆಸರು ಉಲ್ಲೇಖವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರೈತ ಈರಪ್ಪನ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಬಸವರಾಜ ದಡೇಸೂಗೂರು ಪುತ್ರ ಮೌನೇಶ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸ್ವಾಮಿ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ರೈತನಿಗೆ ನ್ಯಾಯ ಓದಗಿಸುವಂತೆ ಈ ಸಂದರ್ಭದಲ್ಲಿ ಪಟ್ಟು ಹಿಡಿಯಲಾಯಿತು. ರೈತನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ರೈತ ಸಂಘಟನೆಯ ಮುಖಂಡರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಮಾಂತಗೊಂಡ ಕುಟುಂಬದವರಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಆರೋಪವನ್ನು ಪ್ರತಿಭಟನಾಕಾರರು ಮಾಡಿದ್ದಾರೆ. ಮಾಂತಗೊಂಡ ಕುಟುಂಬ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಸಂಬಂಧಿಕರು. ಏ. 19ರಂದು ಈ ಘಟನೆ ನಡೆದಿತ್ತು. ಆದರೆ, ಈರಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಈರಪ್ಪ ಭಾನುವಾರ ಸಾವನ್ನಪ್ಪಿದರೆ, ಅವರ ಮಗ ಯಲ್ಲಪ್ಪ ಸೋಮವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ್ರೂ 8 ಜನ ಆರೋಪಿಗಳನ್ನು ಇಲ್ಲಿಯವರೆಗೂ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗಿದೆ.