ಪಣಜಿ: ಮದುವೆಯಾಗಲೆಂದು ಗೋವಾಗೆ ಹೋಗಿದ್ದ ಬೆಂಗಳೂರಿನ ಜೋಡಿಯೊಂದರ ಕಥೆ ಯುವತಿಯ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಪ್ರೇಯಸಿಯನ್ನೇ ಕೊಂದ ಆರೋಪದ ಮೇರೆಗೆ ಈಗ 22 ವರ್ಷದ ಯುವಕನನ್ನು ದಕ್ಷಿಣ ಗೋವಾದ ಪೊಲೀಸರು ಬಂಧಿಸಿದ್ದಾರೆ.
ಗೋವಾದ ಪ್ರತಾಪ್ನಗರದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದೆ. ಪರಸ್ಪರ ಪ್ರೇಮಿಸುತ್ತಿದ್ದ ಸಂಜಯ್ ಕೆವಿನ್ ಎಂ(22) ಮತ್ತು ರೋಶನಿ ಮೋಸಸ್ ಎಂ(22) ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಗೆ ಹೋಗಿದ್ದರು. ಇವರಿಬ್ಬರೂ ಬೆಂಗಳೂರು ಉತ್ತರದ ನಿವಾಸಿಗಳು.
ಗೋವಾ ತಲುಪಿದ ಬಳಿಕ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಆದರೆ, ಯಾವ ವಿಚಾರಕ್ಕೆ ಜಗಳವಾಯಿತು ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. 2 ದಿನಗಳ ಹಿಂದೆ ಜಗಳ ತಾರಕಕ್ಕೇರುತ್ತಿದ್ದಂತೆ, ಪ್ರೇಯಸಿ ರೋಶನಿಯನ್ನು ಕೊಂದ ಸಂಜಯ್, ಆಕೆಯ ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿ ಎಸೆದು, ಬೆಂಗಳೂರಿಗೆ ಮರಳಿದ್ದಾನೆ.
ಸೋಮವಾರ ಸಂಜೆ ವೇಳೆಗೆ ಪ್ರತಾಪ್ ನಗರ ಅರಣ್ಯ ಪ್ರದೇಶದಲ್ಲಿ ರೋಶನಿಯ ಮೃತದೇಹ ಪತ್ತೆಯಾಗಿದೆ. ಆಕೆಯ ಕತ್ತು ಸೀಳಿ ಕೊಲೆ ಮಾಡಿರುವುದು ದೃಢಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಪ್ರೇಮ ಪ್ರಕರಣ, ಮದುವೆಯ ಪ್ರಸ್ತಾಪ ಮತ್ತು ಆ ನಂತರ ನಡೆದ ಜಗಳದಿಂದ ಉಂಟಾದ ಕೊಲೆ ಎಂದು ದಕ್ಷಿಣ ಗೋವಾ ಎಸ್ಪಿ ಟೀಕಮ್ ಸಿಂಗ್ ವರ್ಮಾ ಹೇಳಿದ್ದಾರೆ.
ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ತನಿಖೆ ನಡೆಸಿ, ಸಂಜಯ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅಪರಾಧ ನಡೆದ 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.