ಬೆಂಗಳೂರು | ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಿದ್ದು, ಜಂಟಿ ಕ್ರಿಯಾ ಸಮಿತಿ (ಜೆಎಸಿ) ನೇತೃತ್ವದಲ್ಲಿ ಮತ್ತೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ.
ಕಳೆದ ತಿಂಗಳು ಪ್ರತಿಭಟನೆಗೆ ಕರೆ ನೀಡಿದ್ದ ನೌಕರರು ಮತ್ತೆ ಇದೀಗ ಈ ತಿಂಗಳಲ್ಲೇ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಜೊತೆಗೆ ಆ ಸಾರಿಗೆ ಬಂದ್ ಮಾಡುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ಜನವರಿ 29ರಂದು ನಿಗದಿಯಾಗಿದ್ದ ಹೋರಾಟವನ್ನು ಎಚ್.ವಿ. ಅನಂತ್ ಸುಬ್ಬರಾವ್ ಅವರ ನಿಧನದಿಂದಾಗಿ ಮುಂದೂಡಲಾಗಿತ್ತು. ಈಗ ಫೆಬ್ರವರಿಯ ಮೂರನೇ ವಾರದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಕರೆ ನೀಡಲಾಗಿದೆ.
ಸಾರಿಗೆ ನೌಕರರ ಹೋರಾಟಕ್ಕೆ ದಿನಾಂಕ ಫಿಕ್ಸ್!
ನೌಕರರ ಮುಖ್ಯ ಬೇಡಿಕೆಗಳು ಈಡೇರಿದಿದ್ದರೆ ಬಸ್ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದು, ಸರ್ಕಾರದೊಂದಿಗೆ ಹಲವು ಸುತ್ತು ಚರ್ಚೆ ನಡೆದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ. ಇದೀಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 19ರಂದು ರಾಜ್ಯಾದ್ಯಂತ ಸಾರಿಗೆ ಸೇವೆ ಸ್ಥಗಿತಗೊಳಿಸುವುದು ಸೇರಿದಂತೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಲಾಗಿದೆ.
ಈ ಹೋರಾಟದಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ದೊಡ್ಡ ವ್ಯತ್ಯಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕರು ತೊಂದರೆಗೊಳಗಾಗಬಹುದು. ಮುಖ್ಯವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸ್ಥಗಿತಗೊಳ್ಳಬಹುದು. ಸರ್ಕಾರ ಬೇಡಿಕೆಗಳನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರಿಗೆ ಬಂದ್ಗೆ ಮುಂದಾಗುವುದಾಗಿ ಜಂಟಿ ಕ್ರಿಯಾ ಸಮಿತಿ ಹೇಳಿದೆ.
ಸಾರಿಗೆ ನೌಕರರ ಬೇಡಿಕೆಗಳೇನು?
* ಸ್ಯಾಲರಿ ಅರಿಯರ್ಸ್: ಕಳೆದ 38 ತಿಂಗಳಿಂದ ಬಾಕಿ ಇರುವ ವೇತನ ಅರಿಯರ್ಸ್ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂಬುದೇ ನೌಕರರ ಬೇಡಿಕೆ
* ವೇತನ ಪರಿಷ್ಕರಣೆ: ಜನವರಿ 1, 2024 ರಿಂದ ಜಾರಿಗೆ ಬರಬೇಕಿದ್ದ ವೇತ ಪರಿಷ್ಕರಣೆಯನ್ನು ತಕ್ಷಣ ಜಾರಿಗೆ ಬರುವಂತೆ ಆಗ್ರಹಿಸಲಾಗಿದೆ.
*ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನವನ್ನು ನಮಗೂ ನೀಡಬೇಕು.
*ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು.
*ಖಾಸಗೀಕರಣ, ಭ್ರಷ್ಟಾಚಾರ, ಕಾರ್ಮಿಕರ ಕಿರುಕುಳ ನಿಲ್ಲಬೇಕು.
*ನಮ್ಮ ಹಕ್ಕಿನ ರಜೆಯನ್ನು ಅಗತ್ಯ ಸಂದರ್ಭದಲ್ಲಿ ನೀಡಬೇಕು.
*1-1-2024 ರಿಂದ ವೇತನ ಜಾರಿಗೊಳಿಸಬೇಕು.
*ನೌಕರರಿಗೆ ಉತ್ತಮವಾದ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಬೇಕು.
*ಸಾರಿಗೆ ನಿಗಮದ ವಿದ್ಯುತ್ ಚಾಲಿತ ಬಸ್ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು.
*ಖಾಸಗಿ ಗುತ್ತಿಗೆದಾರರಿಗೆ ಇ-ಬಸ್ಗಳ ನಿರ್ವಹಣೆಯನ್ನು ನೀಡುವ ಪದ್ಧತಿ ಕೈಬಿಡಬೇಕು.
*ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.
ಇದನ್ನೂ ಓದಿ : ಅಬಕಾರಿ ಸಚಿವರ ರಾಜೀನಾಮೆಗೆ ಪ್ರತಿಪಕ್ಷ ಪಟ್ಟು | ಅಹೋರಾತ್ರಿ ಧರಣಿ, ಸದನದಲ್ಲಿಯೇ ನಿದ್ರೆ, ಭಜನೆ!



















