ಹಾವೇರಿ : ದೀಪಾವಳಿ ಹಬ್ಬದ ಅಂಗವಾಗಿ ಜಿಲ್ಲೆಯ ನಾನಾ ಕಡೆ ಅ.22ರಂದು ಏರ್ಪಡಿಸಲಾಗಿದ್ದ ಹೋರಿ ಹಬ್ಬದಲ್ಲಿ ಹೋರಿಗಳ ತಿವಿತಕ್ಕೆ ಮೂವರು ದುರ್ಮರಣ ಹೊಂದಿದ್ದಾರೆ. ಜಿಲ್ಲೆಯ ವಿವಿಧೆಡೆ ನಡೆದ ಹೋರಿ ಓಟದ ಸ್ಪರ್ಧೆಯ ವೇಳೆ ಭಾರೀ ಪ್ರಮಾಣದಲ್ಲಿ ಅನಾಹುತಗಳು ನಡೆದಿದ್ದು, ಒಂದೇ ದಿನ ಮೂವರು ಉಸಿರು ಚೆಲ್ಲಿರುವ ಘಟನೆಗಳು ನಡೆದಿವೆ.
ಹಾವೇರಿ ನಗರದ ದಾನೇಶ್ವರಿ ನಗರದ ನಿವಾಸಿ, ನಿವೃತ್ತ ಹೆಸ್ಕಾಂ ನೌಕರ ಚಂದ್ರಶೇಖರ್ ಕೋಡಿಹಳ್ಳಿ (70) ಎನ್ನುವವರು ಹಳೆ ಪಿ.ಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೊಬ್ಬರಿ ಹೋರಿ ಹಾಯ್ದು ಮೃತಪಟ್ಟಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿಯಿಂದ ಈ ಅವಘಡ ನಡೆದಿದೆ.
ಮತ್ತೊಂದೆಡೆ ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಸಂದರ್ಭ ಎತ್ತುಗಳನ್ನು ಸಾರ್ವಜನಿಕವಾಗಿ ಮರವಣಿಗೆ ಮಾಡುವ ಕಾರ್ಯಕ್ರಮದಲ್ಲಿ ಒಂದು ಎತ್ತು ಬೆದರಿ ಓಡಿಬಂದು ತಿವಿದ ಪರಿಣಾಮ ಘನಿಸಾಬ ಮಹಮ್ಮದ ಹುಸೇನ ಬಂಕಾಪೂರ (75) ಎಂಬವರು ಮೃತಪಟ್ಟಿದ್ದಾರೆ.
ಮತ್ತೊಂದು ಘಟನೆಯಲ್ಲಿ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಭರತ ರಾಮಪ್ಪ ಹಿಂಗಮೇರಿ (24) ಎನ್ನುವ ಯುವಕ ಹೋರಿ ತಿವಿದು ಮೃತಪಟ್ಟಿದ್ದಾರೆ. ಇದಲ್ಲದೆ, ಹೋರಿ ಓಟದ ವೇಳೆ ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಪ್ರಕರಣ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.