ಬೆಂಗಳೂರು : ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಿಪಕ್ಷ ಬಿಜೆಪಿ ಭರ್ಜರಿ ಜಯಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ.

ನಾಲ್ಕು ವರ್ಷಗಳ ನಂತರ ಮಂಕಿಯಲ್ಲಿ ನಡೆದ ಮೊದಲ ಮಹತ್ವದ ಚುನಾವಣೆಯಲ್ಲಿ ಕಮಲ ಪಾಳೆಯ ಗೆದ್ದಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಈ ಬಾರಿಯ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕ ಅವರ ನಡುವಿನ ನೇರ ಪ್ರತಿಷ್ಠೆಯ ಕಣವಾಗಿತ್ತು.
ಅಂತಿಮ ಫಲಿತಾಂಶ ಹೊರಬಿದ್ದಾಗ ಶಿವಾನಂದ ನಾಯ್ಕ ಅವರ ನಾಯಕತ್ವದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿದೆ. ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ಗೆ ಈ ಮಟ್ಟದ ಹಿನ್ನಡೆಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಐತಿಹಾಸಿಕ ಗೆಲುವು ಮಂಕಿ ಪಟ್ಟಣ ಪಂಚಾಯತ್ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳದ ಪಟ್ಟಣ ಪಂಚಾಯಿತ್ನ 4ನೇ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ.

ಎಲ್ಲಿ ಎಷ್ಟು ಸ್ಥಾನ?
ಬಜಪೆ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 19
ಬಿಜೆಪಿ 11, ಕಾಂಗ್ರೆಸ್ 4, ಎಸ್ಡಿಪಿಐ 3, ಪಕ್ಷೇತರ 1
ಕಿನ್ನಿಗೋಳಿ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 18
ಬಿಜೆಪಿ 10, ಕಾಂಗ್ರೆಸ್ 8
ಮಂಕಿ(ಉತ್ತರ ಕನ್ನಡ)
ಒಟ್ಟು ಸ್ಥಾನ – 20
ಬಿಜೆಪಿ 12, ಕಾಂಗ್ರೆಸ್ 8
ಬಾಶೆಟ್ಟಿಹಳ್ಳಿ(ಬೆಂಗಳೂರು ಗ್ರಾಮಾಂತರ)
ಒಟ್ಟು ಸ್ಥಾನ – 19
ಬಿಜೆಪಿ – 15
ಕಾಂಗ್ರೆಸ್ – 3
ಇದನ್ನೂ ಓದಿ : ಟೀಮ್ ಇಂಡಿಯಾಗೆ ಇಶಾನ್ ಕಿಶನ್ ‘ರೀ-ಎಂಟ್ರಿ’ ; ಬಾಗಿಲು ತಟ್ಟಲಿಲ್ಲ, ಒದ್ದು ಒಳಬಂದ ಜಾರ್ಖಂಡ್ ಡೈನಮೈಟ್!



















