ಬಳ್ಳಾರಿ: ಚೀಟಿ ವ್ಯವಹಾರದಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಶಿಕ್ಷಕರು, ಪೊಲೀಸರಂತಹ ಬುದ್ಧಿಜೀವಿಗಳು, ತಿಳುವಳಿಕೆಯುಳ್ಳವರೇ ಇಲ್ಲಿ ಹಣ ಕಳೆದುಕೊಂಡಿರುವುದು ದುರ್ದೈವದ ಸಂಗತಿಯಾಗಿದೆ.
100 ದಿನಗಳಲ್ಲಿ ಹಣ ಡಬಲ್ ಮಾಡುವುದಾಗಿ ಆಂಧ್ರಪ್ರದೇಶದ ವ್ಯಕ್ತಿ 900 ಜನರಿಗೆ ಕೋಟ್ಯಾಂತರ ಟೋಪಿ ಹಾಕಿದ್ದಾನೆ. ಕೋಟಿ ಕೋಟಿ ಹಣ ದೋಚಿ ಈಗ ಆತ ಪರಾರಿಯಾಗಿದ್ದಾನೆ. ಗುಂತಕಲ್ ನ ವಿಶ್ವನಾಥ ಎಂಬ ವ್ಯಕ್ತಿಯೇ ಕೋಟಿ ಕೋಟಿ ಬಾಚಿಕೊಂಡು ಹೋದವ ಎನ್ನಲಾಗಿದೆ.
ಈತ ಗುರೆಳ್ಳು, ಚಟ್ನಿ, ನಾನಾ ಪುಡಿ ಮಾರಾಟದ ಮೂಲಕ ಜನರ ವಿಶ್ವಾಸ ಗಳಿಸಿದ್ದ. ನಂತರ ಅನಧಿಕೃತವಾಗಿ ಚೀಟಿ ವ್ಯವಹಾರ ಆರಂಭಿಸಿದ. ಮೊದಲಿಗೆ ಕಿರಾಣಿ ಸಾಮಾಗ್ರಿ ಮಾರಾಟದಲ್ಲಿ ಹಣ ದ್ವಿಗುಣಗೊಳಿಸುವ ಆಸೆ ಹುಟ್ಟಿಸಿದ್ದಾನೆ. 3 ಸಾವಿರ ರೂ. ಮೌಲ್ಯದ ಕಿರಾಣಿ ಸಾಮಗ್ರಿ ಖರೀದಿಸಿದರೆ, ಗ್ರಾಹಕರು 6 ಸಾವಿರ ರೂ. ಕೊಡಲಾಗುವುದು ಎಂದು ಹೇಳಿದ್ದಾನೆ. ಅದರಂತೆ ಗ್ರಾಹಕರಿಗೆ 6 ಸಾವಿರ ರೂ. ಮರಳಿಸಿದ್ದಾನೆ. ಹೀಗಾಗಿ ಕಿರಾಣಿ ಸಾಮಾಗ್ರಿ ಉಚಿತವಾಗಿ ದೊರೆಯಲಿದೆ ಎಂದು ನಂಬಿದ್ದ ಜನರು ಆತನ ಬಳಿ ಕಿರಾಣಿ ಖರೀದಿಸಿದ್ದಾರೆ. ನಂತರ ಬೇರೆ ಬೇರೆ ವಸ್ತುಗಳಲ್ಲೂ ಇದೇ ರೀತಿ ಚೀಟಿ ವ್ಯವಹಾರ ಆರಂಭಿಸಿ, ಜನರನ್ನು ನಂಬಿಸಿದ್ದಾನೆ.
ಆನಂತರ ಜನರಿಗೆ 100 ದಿನಗಳಲ್ಲಿ ಹಣ ಡಬಲ್ ಮಾಡುವ ಸ್ಕೀಂ ಪರಿಚಯಿಸಿದ್ದಾನೆ. ಆರಂಭದಲ್ಲಿ ನೂರಾರು ಜನರಿಗೆ ಹೇಳಿದಂತೆ ಹಣ ಪಾವತಿಸಿದ್ದಾನೆ. ಆದರೆ, ಜನ ಹೆಚ್ಚಿನ ಲಾಭದಾಸೆಗೆ ಪುನಃ ಹಣ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಈಗ ಕೋಟ್ಯಾಂತರ ರೂ. ಪಡೆದು ಅಸಲು ಹಾಗೂ ಡಬಲ್ ಹಣ ಕೊಡದೆ ಪರಿರಿಯಾಗಿದ್ದಾನೆ. ಚೈನ್ ಲಿಂಕ್ ನಂತೆ ಬಂಡಾವಳ ಹೂಡಲು ಬೇರೊಬ್ಬರನ್ನು ಕರೆದುಕೊಂಡು ಬಂದವರಿಗೂ ಹಣ ನೀಡಿದ್ದಾನೆ. ಆತನ ವಂಚನೆಯ ವ್ಯವಹಾರಗಳಲ್ಲಿ ಶಾಲಾ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಕೆಲ ಪೊಲೀಸ್ ಸಿಬ್ಬಂದಿಯೂ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಈಗ ಆರೋಪಿ ಪರಾರಿಯಾಗಿದ್ದಾನೆ.