ಶ್ರೀನಗರ: ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (LeT) ಮತ್ತು ಹಿಜ್ಬುಲ್ ಮುಜಾಹಿದೀನ್ (HM) ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಮೂವರು ಸರ್ಕಾರಿ ನೌಕರರನ್ನು ವಜಾಗೊಳಿಸಿ ಜಮ್ಮು- ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆದೇಶ ಹೊರಡಿಸಿದ್ದಾರೆ. ವಜಾಗೊಂಡವರನ್ನು ಪೊಲೀಸ್ ಕಾನ್ ಸ್ಟೇಬಲ್ ಮಲಿಕ್ ಇಶ್ಫಾಕ್ ನಸೀರ್, ಶಾಲಾ ಶಿಕ್ಷಕ ಅಜಾಜ್ ಅಹ್ಮದ್ ಮತ್ತು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ಸಹಾಯಕ ವಸೀಮ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ.
ಹಿರಿಯ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ವಜಾಗೊಂಡ ಈ ನೌಕರರು ಭಯೋತ್ಪಾದಕ ಸಂಘಟನೆಗಳಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು ಮತ್ತು ಭದ್ರತಾ ಪಡೆಗಳು ಹಾಗೂ ನಾಗರಿಕರ ಮೇಲೆ ದಾಳಿಗಳನ್ನು ನಡೆಸಲು ಉಗ್ರರಿಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಭಾರತೀಯ ಸಂವಿಧಾನದ 311(2)(c) ಆರ್ಟಿಕಲ್ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಈ ವಿಧಿಯ ಅನ್ವಯ ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ಸರ್ಕಾರಿ ನೌಕರರನ್ನು ವಿಚಾರಣೆ ಇಲ್ಲದೆ ವಜಾಗೊಳಿಸಬಹುದಾಗಿದೆ.
ಮಲಿಕ್ ಇಶ್ಫಾಕ್ ನಸೀರ್ 2005ರಲ್ಲಿ ವಿಶೇಷ ಪೊಲೀಸ್ ಅಧಿಕಾರಿಯಾಗಿ (SPO) ಸೇರಿದ್ದು, 2011ರಲ್ಲಿ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದಿದ್ದರು. ಆದರೆ, 2024ರ ಮೇ ತಿಂಗಳಿನಲ್ಲಿ ಲಷ್ಕರ್-ಎ-ತೊಯ್ಬಾದ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಶಿಕ್ಷಕ ಅಜಾಜ್ ಅಹ್ಮದ್ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದು, ಪಾಕಿಸ್ತಾನದಲ್ಲಿರುವ ಉಗ್ರ ಮೊಹ್ಮದ್ ಕಾಸಿಮ್ನಿಂದ ಸೂಚನೆಗಳನ್ನು ಪಡೆಯುತ್ತಿದ್ದರು.
ಯುವಕರನ್ನು ಉಗ್ರಗಾಮಿಗಳನ್ನಾಗಿ ರೂಪಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಸಂಗ್ರಹಿಸಲು ಅವರು ಸಹಾಯ ಮಾಡಿದ್ದರು. ವಸೀಮ್ ಅಹ್ಮದ್ ಖಾನ್ ಕೂಡ ಉಗ್ರರಿಗೆ ಮಾಹಿತಿ ಒದಗಿಸುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ.
2020ರಿಂದ 2024ರವರೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ 75ಕ್ಕೂ ಹೆಚ್ಚು ಓವರ್ಗ್ರೌಂಡ್ ವರ್ಕರ್ಸ್ (OGW) ಹಾಗೂ ಉಗ್ರ ಸಹಾಯಕರನ್ನು ಸರ್ಕಾರಿ ಉದ್ಯೋಗದಿಂದ ವಜಾಗೊಳಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸಿದ್ದು, ಭಯೋತ್ಪಾದಕರಿಗೆ ಸಹಾಯ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದೂ ಇದರಲ್ಲಿ ಸೇರಿದೆ.