ಬೆಂಗಳೂರು : ಸುಮಾರು 14 ಲಕ್ಷ ಮಂದಿ ಎಪಿಎಲ್ನವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅದನ್ನು ನಾವು ಬಿಪಿಎಲ್ಗೆ ತೊಂದರೆ ಆಗದಂತೆ ಪರಿಷ್ಕರಣೆ ಮಾಡಿ ಹಂತಹಂತವಾಗಿ ತೆಗೆಯಲಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನಧಿಕೃತ ಬಿಪಿಎಲ್ ಕಾರ್ಡ್ಗಳಿವೆ ಎಂಬ ವರದಿ ಕೊಟ್ಟ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ, ಗೈಡ್ಲೈನ್ಸ್ ಮೀರಿ ಎಪಿಎಲ್ನವರು 7 ಲಕ್ಷ ಕಾರ್ಡ್ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಅಂತ ವರದಿ ಇದೆ. ಅದನ್ನು ಪರಿಷ್ಕರಿಸುತ್ತಿದ್ದೇವೆ. ಸುಮಾರು 14 ಲಕ್ಷ ಮಂದಿ ಎಪಿಎಲ್ನಲ್ಲಿ ಇರಬೇಕಾದವರು BPL ಕಾರ್ಡ್ ಹೊಂದಿದ್ದಾರೆ. ಹಂತ ಹಂತವಾಗಿ ಅದನ್ನು ತೆಗೆಯುತ್ತೇವೆ ಎಂದಿದ್ದಾರೆ.
ನಿಜವಾಗಲೂ ಬಿಪಿಎಲ್ ಕಾರ್ಡ್ಗೆ ಯಾರು ಅರ್ಹರಿದ್ದಾರೋ ಅವರ ಹೆಸರು ಡಿಲೀಟ್ ಆಗಲ್ಲ. ಡಿಲೀಟ್ ಆಗಿದ್ದರೆ, ತಹಶೀಲ್ದಾರ್ಗೆ ಅರ್ಜಿ ಹಾಕಬೇಕಿದ್ದು, ಮತ್ತೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ. ಎಪಿಎಲ್ ಕಾರ್ಡ್ ಇರುವವರಿಗೆ ಸದ್ಯಕ್ಕೆ ನಾವೇನೂ ಮಾಡ್ತಾ ಇಲ್ಲ. ಬಿಪಿಎಲ್ನಲ್ಲಿ ಸಾಕಷ್ಟು ಜನ ಎಪಿಎಲ್ನವರು ಇದ್ದಾರೆ. ಬಿಪಿಎಲ್ ಕಾರ್ಡ್ ಮಿಸ್ ಆಗಿದ್ರೆ ಅಂಥವರಿಗೆ ಕೊಡುತ್ತಿದ್ದೇವೆ. BPLಗೆ ಯಾರೂ ಅರ್ಹರಲ್ಲವೋ ಅವರು ಎಪಿಎಲ್ಗೆ ಹೋಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ, ರಾಜ್ಯದಲ್ಲಿ ಮುಂದುವರೆದ LPG ಸಮಸ್ಯೆ ವಿಚಾರವಾಗಿ ಮಾತನಾಡಿ, ನಾಳೆ ಮೀಟಿಂಗ್ ಕರೆದಿದ್ದೇನೆ. ಅವರೆಲ್ಲ ವಿವರ ತಗೊಂಡು ಬರ್ತಾರೆ. ಆಟೋ ಓಡಿಸುವವರ ಜೀವನ ಗ್ಯಾಸ್ ಮೇಲೆ ಅವಲಂಬಿಸಿದೆ. ಅವರಿಗೆ ಅನಿವಾರ್ಯವಾಗಿ ಗ್ಯಾಸ್ ಕೊಡಬೇಕಾಗುತ್ತದೆ. ನಾನೂ ಕೂಡಾ ಒತ್ತಾಯ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಆದ್ಯತೆಯ ಆಧಾರದ ಮೇಲೆ ಗ್ಯಾಸ್ ಕೊಡಬೇಕು ಅಂತ ಮನವಿ ಮಾಡಿದ್ದೇವೆ. ಅದಕ್ಕೆ ಏನು ರಿಪ್ಲೈ ಬರುತ್ತೋ ಕಾದು ನೋಡಿ ಮಾತನಾಡುತ್ತೇನೆ ಎಂದರು.
ಬ್ಲ್ಯಾಕ್ ಮಾರ್ಕೆಟ್ನಲ್ಲಿ ಗ್ಯಾಸ್ ಸಿಲಿಂಡರ್ ಹೆಚ್ಚು ರೇಟ್ಗೆ ಮಾರಾಟ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಪೊಲೀಸ್ ಕಮಿಷನರ್ಗೆ ಹೇಳಿ ಬಂದೋಬಸ್ತ್ ಮಾಡೋಕೆ ಹೇಳುತ್ತೇನೆ. ನಮ್ಮ ಇಲಾಖೆಯವರು ರೇಡ್ ಮಾಡಬೇಕು. ಅದಕ್ಕಾಗಿ ಮೌಲ್ಯಮಾಪನ ಇಲಾಖೆ ಇದೆ. ನಾಳೆ ಅವರನ್ನು ಮೀಟಿಂಗ್ಗೆ ಕರೆದಿದ್ದೇನೆ. ಇಲಾಖೆ ಮುಖ್ಯಸ್ಥರನ್ನು ಕರೆದಿದ್ದೇನೆ. ಆಯಿಲ್ ಕಾರ್ಪೊರೇಷನ್ ಅವರನ್ನೂ ಕರೆದಿದ್ದೇನೆ. ಕುಳಿತು ಮಾತನಾಡಿ ಪರಿಹಾರ ಹುಡುಕಬೇಕು. ಆಯಿಲ್ ಕಾರ್ಪೊರೇಷನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಏನು ವರದಿ ತರುತ್ತಾರೋ ನೋಡಿ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಿ ಸಿಕ್ಕಿಬಿದ್ದ ವಾರ್ನರ್.. ಹಿರಿಯ ಆಟಗಾರನ ವರ್ತನೆ ಬಗ್ಗೆ ಭಾರೀ ಚರ್ಚೆ!



















