ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಆಪರೇಷನ್ ಸಿಂಧೂರದ ಕ್ರಮವನ್ನು ಮತ್ತು ಇದು ಪಾಕಿಸ್ತಾನ ಪ್ರಯೋಜಿತ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲೇ, ಭಾರತದ ರಾಜತಾಂತ್ರಿಕ ಕಾರ್ಯಾಚರಣೆ ಭಾಗವಾಗಿ ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗವನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.
ರಾಷ್ಟ್ರೀಯ ಒಮ್ಮತ ಮತ್ತು ಯಾವುದೇ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಭಾರತದ ದೃಢ ನಿರ್ಧಾರದ ಕುರಿತು ಈ ನಿಯೋಗ ಜಗತ್ತಿನ ಹಲವು ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡಲಿದೆ. ಭಯೋತ್ಪಾದನೆ ಕುರಿತು ಭಾರತವು ಶೂನ್ಯ ಸಹಿಷ್ಣುತೆ ಹೊಂದಿದೆ ಎಂಬ ಸಂಗತಿಯನ್ನು ತಿಳಿಸಿಕೊಡಲಿದೆ. ಅಷ್ಟೇ ಅಲ್ಲಾ ಜಾಗತಿಕ ಮಟ್ಟದಲ್ಲಿ ಭಾರತದ ನಿಲುವನ್ನು ಸ್ಪಷ್ಟ ಧ್ವನಿಯಲ್ಲಿ ತಿಳಿಸುವ ಉದ್ದೇಶದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಯೋಗದಲ್ಲಿ ಯಾರಿರಬೇಕು ಎಂಬುದರ ಕುರಿತು ಅತ್ಯಂತ ಜಾಗರೂಕತೆಯಿಂದ ಸದಸ್ಯರನ್ನು ಮೋದಿ ಸರ್ಕಾರ ಆಯ್ಕೆ ಮಾಡಿದೆ.
ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಬೈಜಯಂತ್ ಪಾಂಡಾ, ಕಾಂಗ್ರೆಸ್ ಸಂಸದ ಶಶಿ ತರೂರ್, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್ಸಿಪಿ ಶರದ್ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ ಹಾಗೂ ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಈ ನಿಯೋಗವನ್ನು ಮುನ್ನಡೆಸಲಿದ್ದಾರೆ. ಪ್ರತಿ ನಿಯೋಗವು ತಲಾ ಐದು ರಾಷ್ಟ್ರಗಳಿಗೆ ಭೇಟಿ ನೀಡಲಿದೆ. ನಿಯೋಗದಲ್ಲಿ ಆಯಾ ರಾಷ್ಟ್ರಗಳ ರಾಯಭಾರ ಕಚೇರಿ ಅಧಿಕಾರಿಗಳು ಇರಲಿದ್ದಾರೆ.