ಚಿತ್ರದುರ್ಗ: ಜಾತಿ ಮಠಗಳಿಂದ ಸಮಾಜ ಕಲುಷಿತಯಾಗುತ್ತಿದೆ ಎಂಬ ಹೇಳಿಕೆಗೆ ಚಿತ್ರದುರ್ಗದಲ್ಲಿ ಪಂಚಮಸಾಲಿ ಮಠದ ವಚನಾನಂದಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಲುಷಿತ ಮನಸ್ಥಿತಿ ಇದ್ದವರಿಂದ ಮಾತ್ರ ಈರೀತಿ ಮಾತು ಸಾಧ್ಯ. ರಂಭಾಪುರಿಶ್ರೀಗೆ ಕಲುಷಿತ ಮನಸ್ಥಿತಿ ಇದೆ. ಜಾತಿ ಮಠಗಳಿಂದ ಸಮಾಜ ಕಲುಷಿತವಾಗುತ್ತಿದೆ ಎನ್ನುವುದಕ್ಕೆ ನೈತಿಕ ಹಕ್ಕಿಲ್ಲ. ಪಂಚಮಸಾಲಿ ಪೀಠಗಳ ಉಗಮಕ್ಕೆ ಕಾರಣವೇನು ಎನ್ನುವುದನ್ನು ರಂಭಾಪುರಿ ಶ್ರೀಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.
ಜಾತಿ ಪೀಠಗಳು ಜ್ಯೋತಿಯಾಗಿ ಜಾತ್ಯಾತೀತ ತತ್ವ ಅಳವಡಿಸಿಕೊಂಡಿವೆ. 2003ರಲ್ಲಿ ಪಂಚಪೀಠದವರು ಬೇಡ ಜಂಗಮ, ದಲಿತರು, ಎಸ್ಸಿ ಎಂದಿದ್ದರು. ವಾಜಪೇಯಿ, ಅಡ್ವಾಣಿ ಬಳಿ ಹೋಗಿ ಪ್ರಮಾಣಪತ್ರ ಕೇಳಿದ್ದರು. ಪಂಚ ಪೀಠದವರು ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೇಳಿರಲಿಲ್ಲ. ನಮ್ಮ ಜನಾಂಗಕ್ಕೆಂದು ಬೇಡ ಜಂಗಮರಿಗೆ ಮಾತ್ರ ಮೀಸಲಾತಿ ಬೇಕೆಂದು ಕೇಳಿದ್ದರು. ವೀರಶೈವ ಲಿಂಗಾಯತರಲ್ಲಿ ಪಂಚಪೀಠದವರದ್ದು ಮೈಕ್ರೋ ಸಮಾಜ.
ಪೂಜೆ ಪುನಸ್ಕಾರ ಮಾಡುವ ಜನಾಂಗದ ಶ್ರೀಗಳವರು ಅಷ್ಟೇ. ವೀರಶೈವ ಲಿಂಗಾಯತರಲ್ಲಿ ಶೇ.80ರಷ್ಟು ಪಂಚಮಸಾಲಿ ಜನ. ಪಂಚ ಪೀಠದವರದ್ದು ಮೈಕ್ರೋ ಜನಾಂಗ. ನಮ್ಮ ಪಂಚಮಸಾಲಿ ಮ್ಯಾಕ್ರೋ ಜನಾಂಗ. ರಾಜ್ಯದಲ್ಲಿ ಪಂಚ ಪೀಠದವರ ಜನಾಂಗ ಎಷ್ಟಿದೆ?, ತುಂಬಾ ಕಡಿಮೆಯಿದೆ. ಊರಿಗೆ ಎರಡೋ ಮೂರೋ ಮನೆಗಳಿವೆ ಎಂದಿದ್ದಾರೆ.
ಪೀಠದಲ್ಲಿ ಕುಳಿತವರ ತಪ್ಪು ಹೇಳಿಕೆಗಳಿಂದ ಒಡಕು ಮೂಡುತ್ತಿದೆ. ವೀರಶೈವ ಲಿಂಗಾಯತ ಒಳಪಂಗಡ ಒಟ್ಟಾಗಬೇಕೆಂಬುದು ನಮ್ಮ ಅಭಿಪ್ರಾಯ. ದಾವಣಗೆರೆಯಲ್ಲಿ ಪಂಚಪೀಠಾಧೀಶರ ನೇತೃತ್ವದಲ್ಲಿ ಶೃಂಗಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶೃಂಗಸಭೆ ನಿರ್ಣಯ ಪಂಚಮಸಾಲಿ ಸಮಾಜಕ್ಕೆ ಸಂಬಂಧ ಇಲ್ಲ. ಆಗಷ್ಟ್ 10ಕ್ಕೆ ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಇದೆ. ಸಭೆಯಲ್ಲಿ ಕೈಗೊಂಡ ನಿರ್ಣಯ ಸಮಾಜಕ್ಕೆ ಕಳಿಸುತ್ತೇವೆ. ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಸ್ಪಷ್ಟ ಸಂದೇಶ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.