ನವದೆಹಲಿ: ನ್ಯಾಯಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದು ನಿಂತಿರುವ ನ್ಯಾಯದೇವತೆಯ ಪ್ರತಿಮೆಯನ್ನು ಎಲ್ಲರೂ ನೋಡಿದ್ದೇವೆ. ಆದರೆ, ಈಗ ಸುಪ್ರೀಂ ಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ಹಾಗೂ ಕೈಯಲ್ಲಿ ಕತ್ತಿಯ ಬದಲಿಗೆ ಸಂವಿಧಾನ ಹಿಡಿದಿರುವ ಹೊಸ ನ್ಯಾಯದೇವತೆಯ ಪ್ರತಿಮೆ ಅನಾವರಣಗೊಳಿಸಲಾಗಿದೆ.
ಸಿಜೆಐ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯದೇವತೆ ಪ್ರತಿಮೆಯ ಕಲ್ಪನೆಯನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಸಂವಿಧಾನದ ಅನುಸಾರವೇ ನ್ಯಾಯ ವಿತರಣೆಯಾಗಲಿದೆ. ಕಾನೂನು ಕುರುಡಲ್ಲ, ಅದು ಎಲ್ಲರಿಗೂ ಸಮಾನ ಎಂಬ ಸಂದೇಶ ರವಾನಿಸುವುದು ನ್ಯಾಯದೇವತೆ ಪ್ರತಿಮೆ ಮರುವಿನ್ಯಾಸದ ಹಿಂದಿನ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.
ನ್ಯಾಯ ದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿರುವುದು ದಶಕಗಳಿಂದಲೂ ಚಾಲ್ತಿಯಲ್ಲಿತ್ತು. ಈ ಸಾಂಪ್ರದಾಯಿಕ ಪ್ರಾತಿನಿಧ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಯಾರಿಗೂ ತಾರತಮ್ಯ ಇರುವುದಿಲ್ಲ ಎಂಬುವುದನ್ನು ಸಂಕೇತಿಸುವಂತೆ ನ್ಯಾಯ ದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಕಾನೂನು ಕುರುಡಲ್ಲ. ಪ್ರತಿಯೊಬ್ಬರನ್ನೂ ಅದು ನೋಡುವಂತಾಗಬೇಕು. ವಸಾಹತುಶಾಹಿ ಕಾನೂನುಗಳ ಹಿನ್ನೆಲೆಯಲ್ಲಿ ನ್ಯಾಯದಾನ ಮಾಡುವುದು ಸಮರ್ಪಕವಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ನ್ಯಾಯ ದೇವತೆಯ ಸ್ವರೂಪದಲ್ಲಿ ಬದಲಾವಣೆಯಾಗಬೇಕು ಎಂದು ಸಿಜೆಐ ತಿಳಿಸಿದ್ದರು. ಪ್ರತಿಮೆಯು ಒಂದು ಕೈಯಲ್ಲಿ ಸಂವಿಧಾನ ಹಿಡಿಯಬೇಕೇ ವಿನಾ ಖಡ್ಗ ಅಲ್ಲ. ಇದರಿಂದ ಸಂವಿಧಾನಕ್ಕೆ ಅನುಗುಣವಾಗಿ ನ್ಯಾಯ ದೇವತೆ ನ್ಯಾಯದಾನ ಮಾಡುತ್ತಾಳೆ ಎಂಬ ಸಂದೇಶ ನೀಡಿದಂತಾಗುತ್ತದೆ. ಹೀಗಾಗಿ ಈ ರೀತಿಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.