:
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ವಿಭಜನೆ ಮತ್ತು ದ್ವಿ-ರಾಷ್ಟ್ರ ಸಿದ್ಧಾಂತವನ್ನು ಪ್ರಸ್ತಾಪಿಸುತ್ತಾ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಉದ್ಧಟತನದ ಮಾತುಗಳನ್ನಾಡಿದ್ದು, ಭಾರತೀಯರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆ ಕುರಿತು ಮಾತನಾಡುವ ವೇಳೆ ಅವರು, “ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಭಾರೀ ವ್ಯತ್ಯಾಸಗಳಿದ್ದು, ಅವುಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ” ಎಂದು ಪಾಕಿಸ್ತಾನೀಯರಿಗೆ ಕರೆಕೊಟ್ಟಿದ್ದಾರೆ. 1947 ರಲ್ಲಿ ಪಾಕಿಸ್ತಾನದ ರಚನೆಗೆ ಕಾರಣವಾದ ದ್ವಿ-ರಾಷ್ಟ್ರ ಸಿದ್ಧಾಂತವನ್ನು ಪ್ರಸ್ತಾಪಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
“ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ವಿಷಯದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ನಂಬಿದ್ದರು. ನಮ್ಮ ಧರ್ಮವು ಭಿನ್ನವಾದದ್ದು. ನಮ್ಮ ಪದ್ಧತಿಗಳು ವಿಭಿನ್ನದದ್ದು. ನಮ್ಮ ಸಂಪ್ರದಾಯಗಳು ವಿಭಿನ್ನ. ನಮ್ಮ ಆಲೋಚನೆಗಳೂ ವಿಭಿನ್ನ. ನಮ್ಮ ಮಹತ್ವಾಕಾಂಕ್ಷೆಗಳೂ ವಿಭಿನ್ನ… ಇದು ದ್ವಿರಾಷ್ಟ್ರ ಸಿದ್ಧಾಂತದ ಅಡಿಪಾಯವಾಗಿತ್ತು. ನಾವು ಎರಡು ರಾಷ್ಟ್ರಗಳೇ ಹೊರತು, ಒಂದೇ ಅಲ್ಲ ಎಂಬ ನಂಬಿಕೆಯ ಮೇಲೆಯೇ ಈ ಅಡಿಪಾಯವನ್ನು ಹಾಕಲಾಯಿತು” ಎಂದು ಜನರಲ್ ಮುನೀರ್ ಹೇಳಿದ್ದಾರೆ.
“ನೀವು ಇದನ್ನು ನಿಮ್ಮ ಮಕ್ಕಳಿಗೆ ಹೇಳಬೇಕು. ಆ ಮೂಲಕ ಅವರು ಪಾಕಿಸ್ತಾನದ ಕಥೆಯನ್ನು ಎಂದಿಗೂ ಮರೆಯದಂತೆ ನೋಡಿಕೊಳ್ಳಬೇಕು” ಎಂದು ಮುನೀರ್ ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. “ನಮ್ಮ ಪೂರ್ವಜರು ಅಪಾರ ತ್ಯಾಗಗಳನ್ನು ಮಾಡಿದ್ದಾರೆ ಮತ್ತು ನಾವೂ ಈ ದೇಶದ ಸೃಷ್ಟಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದೇವೆ… ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಪುತ್ರರು ಮತ್ತು ಪುತ್ರಿಯರೇ, ದಯವಿಟ್ಟು ಈ ಇತಿಹಾಸದ ಕಥೆಯನ್ನು ಮರೆಯದಿರಿ” ಎಂದಿದ್ದಾರೆ. ದೇಶದ “ಅಡಿಪಾಯವನ್ನು ಕಲೀಮಾ” (ಇಸ್ಲಾಮಿಕ್ ನಂಬಿಕೆಯ ಘೋಷಣೆ) ಮೇಲೆ ಹಾಕಲಾಗಿದೆ ಎಂದೂ ಜ.ಮುನೀರ್ ಹೇಳಿದ್ದಾರೆ.
ಇದೇ ವೇಳೆ ಇಸ್ಲಾಮಾಬಾದ್ ನಲ್ಲಿ ನಡೆದ ಈ ಸಮಾವೇಶದಲ್ಲಿ ಮುನೀರ್ ಅವರು, ಬಲೂಚ್ ಬಂಡುಕೋರರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅವರನ್ನು ದಮನ ಮಾಡುವ ಪ್ರತಿಜ್ಞೆ ಮಾಡಿದರು. “ಒಂದಲ್ಲ ಹತ್ತು ತಲೆಮಾರಿನಷ್ಟು ಭಯೋತ್ಪಾದಕರು ಬಂದರೂ ಬಲೂಚಿಸ್ತಾನ ಮತ್ತು ಪಾಕಿಸ್ತಾನಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ” ಎಂದೂ ಅವರು ಹೇಳಿದ್ದಾರೆ.
1940ರ ದಶಕದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಪ್ರತಿಪಾದಿಸಿದ ದ್ವಿ-ರಾಷ್ಟ್ರ ಸಿದ್ಧಾಂತವು ಮುಸ್ಲಿಮರು ಮತ್ತು ಹಿಂದೂಗಳು ವಿಭಿನ್ನ ರಾಷ್ಟ್ರಗಳನ್ನು ಹೊಂದಬೇಕು ಎಂದು ವಾದಿಸಿದ್ದರು. ಈ ಆಧಾರದ ಮೇಲೆ ಜಿನ್ನಾ ಮುಸ್ಲಿಮರಿಗೆ ಪ್ರತ್ಯೇಕ ತಾಯ್ನಾಡಿನ ಅಗತ್ಯವನ್ನು ಪ್ರತಿಪಾದಿಸಿದ್ದರು. ಈ ಸಿದ್ಧಾಂತವೇ 1947ರಲ್ಲಿ ಭಾರತದ ವಿಭಜನೆಗೆ ಕಾರಣವಾಯಿತು. ಪಾಕಿಸ್ತಾನವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿ ರಚನೆಯಾಯಿತು.
ಇಸ್ಲಾಮಿಕ್ ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನವು ಹಿಂದೂಗಳು ಸೇರಿದಂತೆ ತನ್ನ ಅಲ್ಪಸಂಖ್ಯಾತರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಆದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ದಶಕಗಳಿಂದ ಕ್ಷೀಣಿಸುತ್ತಿದೆ.
ಶಾಂತಿಪಾಲನಾ ಸುಧಾರಣೆಗಳ ಕುರಿತು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಕಾಶ್ಮೀರ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ತಗಾದೆ ತೆಗೆದಿದ್ದ ಪಾಕಿಸ್ತಾನವನ್ನು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಸರಿಯಾಗಿ ಝಾಡಿಸಿದ್ದರು. ಇದಾದ ಬೆನ್ನಲ್ಲೇ ಜನರಲ್ ಮುನೀರ್ ಅವರಿಂದ ಹಿಂದೂ-ಮುಸ್ಲಿಂ ವಿಭಜನೆಯ ಮಾತುಗಲು ಹೊರಬಿದ್ದಿದೆ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ತನ್ನ ಭೂಪ್ರದೇಶದ ಭಾಗಗಳನ್ನು ಖಾಲಿ ಮಾಡುವಂತೆ ವಿಶ್ವಸಂಸ್ಥೆಯಲ್ಲಿ ಇಸ್ಲಾಮಾಬಾದ್ಗೆ ಭಾರತ ಸೂಚಿಸಿತ್ತು.