ಬೆಂಗಳೂರು: “ಹಾಸನ ಜಿಲ್ಲೆಯ ಜನ ದೇವೇಗೌಡರ ಕುಟುಂಬದ ನಾಣ್ಯದ ಎರಡೂ ಮುಖಗಳನ್ನು ನೋಡಿಯಾಗಿದೆ. ಹೀಗಾಗಿ 2028ರ ಚುನಾವಣೆಯಲ್ಲಿ ಹಾಸನದ 7ಕ್ಕೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ” ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಗುರುವಾರ ಹಾಸನ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಳೆದ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ನಮ್ಮವರೇ ನಮಗೆ ಮೋಸ ಮಾಡಿದ್ದಾರೆ. ಅದು ನನಗೆ ಗೊತ್ತಿದೆ. ಮುಂದಿನ ಚುನಾವಣೆಗೆ ನಾವು ಸಿದ್ಧರಾಗೋಣ. ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರು ಸಾವಿರ ಬಾರಿ ತಬ್ಬಿಕೊಳ್ಳಲಿ. ಆದರೆ ಕಾರ್ಯಕರ್ತರು ಒಂದಾಗಲು ಸಾಧ್ಯವೇ ಇಲ್ಲ. ಆ ಪಕ್ಷಗಳಲ್ಲಿ ನಾಯಕರನ್ನು ಬಳಸಿ ಬಿಸಾಡುತ್ತಾರೆ” ಎಂದು ತಿಳಿಸಿದರು.
ಕಾಂಗ್ರೆಸ್ ಎಂಬ ಸಮುದ್ರ ತಿಮಿಂಗಲ, ದೊಡ್ಡ ಮೀನು, ಸಣ್ಣ ಮೀನು ಎಲ್ಲರಿಗೂ ಆಸರೆಯಾಗಿದೆ
“ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಈ ಸಮುದ್ರದಲ್ಲಿ ತಿಮಿಂಗಲ, ವಜ್ರ, ಸಣ್ಣ ಮೀನು, ದೊಡ್ಡ ಮೀನು ಎಲ್ಲವೂ ಇರುತ್ತದೆ. ಎಲ್ಲದಕ್ಕೂ ಈ ಸಮುದ್ರ ಆಸರೆಯಾಗಿರುತ್ತದೆ. ಈ ಪಕ್ಷಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಈ ಪಕ್ಷದ ಧ್ವಜ ದೇಶಕ್ಕೆ ರಾಷ್ಟ್ರ ಧ್ವಜವನ್ನು ತಯಾರಿಸಿಕೊಟ್ಟಿದೆ. ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ ಕೊಟ್ಟ ಪಕ್ಷ ಇದು. ಕಾರಣಾಂತರಗಳಿಂದ ನಮ್ಮ ಪಕ್ಷ ಕೆಲವು ಕಡೆ ಹಿನ್ನಡೆ ಅನುಭವಿಸಿರಬಹುದು. ಆದರೆ ಈ ಹಿನ್ನಡೆ ಶಾಶ್ವತವಾಗಿರಲು ಸಾಧ್ಯವಿಲ್ಲ” ಎಂದರು.
“ಬಹಳ ಜನ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು ಎಂದು ಬಯಸಿದ್ದಾರೆ. ಹೀಗಾಗಿ ಸ್ಥಳೀಯ ಮುಖಂಡರಿಗೆ ಪಕ್ಷ ಸೇರ್ಪಡೆ ಬಗ್ಗೆ ಸಂದೇಶ ನೀಡಿದ್ದೇನೆ. ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರಲು ಬಂದಿರುವ ಎಲ್ಲರಿಗೂ ಪಕ್ಷದ ಅಧ್ಯಕ್ಷನಾಗಿ ಸ್ವಾಗತಿಸುತ್ತೇನೆ. ಹಾಸನ ಜಿಲ್ಲೆಗೆ ಪಿಡ್ಬ್ಲ್ಯೂಡಿ ಸಚಿವರು ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ನಿಮ್ಮ ಲೋಕಸಭಾ ಸದಸ್ಯರಿಗೆ ಈ ಕಾರ್ಯಕ್ರಮಕ್ಕೆ ಬರಬೇಡಿ ಎಂದು ನಾನೇ ಹೇಳಿದೆ. ಸಚಿವರು ಜಿಲ್ಲೆಗೆ ಬಂದಾಗ ಯಾರಾದರೂ ಅವರ ಜತೆಯಲ್ಲಿ ಇರಬೇಕು ಎಂದು ಸಲಹೆ ನೀಡಿದೆ” ಎಂದು ತಿಳಿಸಿದರು.
“ಇತ್ತೀಚೆಗೆ ದೇಶ ಯುದ್ಧದ ಪರಿಸ್ಥಿತಿ ಎದುರಾದಾಗ ಎಲ್ಲರೂ ಸ್ಮರಿಸಿದ್ದು ಇಂದಿರಾ ಗಾಂಧಿ ಅವರನ್ನು. ಬೆಂಗಳೂರಿನಲ್ಲಿರುವ ಬಹುತೇಕ ಎಲ್ಲಾ ಸಾರ್ವಜನಿಕ ಉದ್ಯಮಗಳು ಆರಪಂಭವಾಗಿದ್ದೇ ನೆಹರೂ ಅವರ ಕಾಲದಲ್ಲಿ. ದೇಶದಲ್ಲಿನ ಪ್ರಮುಖ ಅಣೆಕಟ್ಟುಗಳನ್ನು ಕಟ್ಟಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ, ದಳದ ಅವಧಿಯಲ್ಲಿ ಒಂದು ಅಣೆಕಟ್ಟು ಕಟ್ಟಲಾಗಿದೆಯೇ? ನಿಮ್ಮ ಜಿಲ್ಲೆಯಿಂದ ಎತ್ತಿನಹೊಳೆ ಕುಡಿಯುವ ನೀರನ್ನು ತರುತ್ತಿದ್ದೇವೆ. ಈ ಯೋಜನೆಯನ್ನು ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಜೆಡಿಎಸ್, ಬಿಜೆಪಿ ಅಲ್ಲ” ಎಂದರು.
“ರಾಜ್ಯದಲ್ಲಿ ಬಿಜೆಪಿ ಎಂಟು ವರ್ಷ ಕುಮಾರಸ್ವಾಮಿ ಅವರು 3-4 ವರ್ಷ ಸರ್ಕಾರ ಮಾಡಿದ್ದಾರೆ. ದೇವೇಗೌಡರು 20 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಜೆ.ಹೆಚ್ ಪಟೇಲ್ ಇದ್ದರು. ಅವರ ಸರ್ಕಾರದ ಅವಧಿಯಲ್ಲಿನ ಯಾವ ಯೋಜನೆಯನ್ನು ನೀವು ಉದಾಹರಣೆಯಾಗಿ ನೀಡುತ್ತೀರಿ?” ಎಂದು ಸವಾಲು ಹಾಕಿದರು.
“ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಬಡ ರೈತರಿಗೆ ಭೂಮಿ ನೀಡಲಾಯಿತು. ನಾವು ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡುವಾಗ ಓರ್ವ ವೃದ್ಧೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಆಗ ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿರುವ ಸೌತೇಕಾಯಿ ಎಂದು ಹೇಳಿದರು. ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ, ಬಡವರಿಗೆ ನಿವೇಶನ, ಶೈಕ್ಷಣಿಕ ಹಕ್ಕು, ಅರಣ್ಯ ಭೂಮಿ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಕಾಲದಲ್ಲಿ. ಈಗ ನಮ್ಮ ಸರ್ಕಾರದಲ್ಲಿ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನವರು ಈ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ” ಎಂದರು.
ಕುಮಾರಸ್ವಾಮಿಗೆ ಕಿಂಚಿತ್ತೂ ಉಪಕಾರ ಸ್ಮರಣೆಯಿಲ್ಲ
“ಕಳೆದ ಚುನಾವಣೆ ವೇಳೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಐದು ವರ್ಷ ಅಧಿಕಾರ ನೀಡಿದೆವು. ಆದರೆ ಕುಮಾರಸ್ವಾಮಿಗೆ ಕಿಂಚಿತ್ತೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ಸರ್ಕಾರ ಉಳಿಸಿಕೊಳ್ಳಲಾಗದೇ, ನಮ್ಮ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ನಾವು ನೋಡುವಷ್ಟು ನೋಡಿದೆವು. ಮೈತ್ರಿ ಸರ್ಕಾರವನ್ನು ಬೀಳಿಸಿದವರ ಜತೆ ಕುಮಾರಸ್ವಾಮಿ ಈಗ ಆಲಿಂಗನ ಮಾಡಿಕೊಂಡಿದ್ದಾರೆ” ಎಂದು ಲೇವಡಿ ಮಾಡಿದರು.
“ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಲು ಸಾಧ್ಯವೇ? ಮೈತ್ರಿ ಸರ್ಕಾರವನ್ನು ಕೆಡವಲು ಕಾಂಗ್ರೆಸ್ ಪಕ್ಷವನ್ನು ಬಿಟ್ಟ ಎಲ್ಲಾ ಶಾಸಕರಿಗೂ ನಾನು ಸದನದಲ್ಲಿ ಒಂದು ಮಾತು ಹೇಳಿದ್ದೆ. ಬಿಜೆಪಿಯಲ್ಲಿ ನೀವೆಲ್ಲರೂ ರಾಜಕೀಯ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಈಗ ಬಿಜೆಪಿ ಸಂಸದ ಸುಧಾಕರ್ ಅವರು ಬಿಜೆಪಿಯಲ್ಲಿ ನನ್ನನ್ನು ರಾಜಕೀಯ ಸಮಾಧಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈಗ ಸೋಮಶೇಖರ್, ಹೆಬ್ಬಾರ್ ಅವರ ಕಥೆ ಏನಾಯ್ತು? ಸಿ.ಪಿ ಯೋಗೇಶ್ವರ್ ಕತೆ ಏನಾಯ್ತು? ಈಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಎಂಟಿಬಿ ನಾಗರಾಜ್, ಬಿ.ಸಿ ಪಾಟೀಲ್ ಏನಾದರು? ರಾಯಚೂರು, ಮಸ್ಕಿ ಕ್ಷೇತ್ರದಲ್ಲಿ ಏನಾಯ್ತು? ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ರಾಜರಾಜೇಶ್ವರಿ ನಗರ ಶಾಸಕನ ಪರಿಸ್ಥಿತಿ ಏನಾಗಿದೆ? ಆತ ಮಾಡಬಾರದು ಮಾಡಿ ಈಗ ದಿನಬೆಳಗಾದರೆ ನನ್ನನ್ನು ಸಾಯಿಸಿಬಿಡುತ್ತಾರೆ ಎನ್ನುತ್ತಿದ್ದಾನಂತೆ” ಎಂದರು.
“ಇವರಲ್ಲಿ ಕೆಲವರು ಪಕ್ಷದಿಂದ ಹೋಗಿದ್ದೇ ಒಳ್ಳೆಯದಾಯ್ತು. ಪಕ್ಷ ಬಿಟ್ಟು ಹೋದವರಿಗೆ ಈಗ ಕಾಂಗ್ರೆಸ್ ಪಕ್ಷವೇ ಸರಿ ಎಂದು ಅರಿವಾಗಿದೆ. ನಾನು ಈಗಲೂ ದಳದ ಕಾರ್ಯಕರ್ತರಿಗೆ ಹೇಳುತ್ತಿದ್ದೇನೆ. ನೀವು ನಿಮ್ಮ ನಾಯಕರನ್ನು ನಂಬಿಕೊಂಡು ಕೂತರೆ ರಾಜಕೀಯ ಭವಿಷ್ಯವಿಲ್ಲ. ಅದು ಪಕ್ಷ ಅಲ್ಲ, ಕೇವಲ ಕುಟುಂಬ. ನನ್ನ ತಮ್ಮನನ್ನು ಸೋಲಿಸಲು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ನನಗೆ ತಂತ್ರ ಮಾಡಲು ಗೊತ್ತಿಲ್ಲವೇ? ಅದಕ್ಕೆ ಚನ್ನಪಟ್ಟಣದಲ್ಲಿ ಅವರ ಮೊಮ್ಮಗನನ್ನು ಸೋಲಿಸಿದೆವು. ಅವರಿಂದ ಕಲಿತ ಪಾಠವೇ ಬೇಕಾದಷ್ಟಿದೆ” ಎಂದರು.