ಶಿವಮೊಗ್ಗ : ಧರ್ಮಸ್ಥಳ ಎಂದರೆ ಕೊಲೆಗಡುಕರ ಹಾಗೂ ಅತ್ಯಾಚಾರಿಗಳು ಎಂದು ಬಿಂಬಿಸುವ ಕೆಲಸ ಆಗುತ್ತಿದ್ದು, ಆ ಕುತಂತ್ರಿಗಳ ಕುತಂತ್ರವನ್ನು ಬಯಲು ಮಾಡುವುದಕ್ಕಾಗಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮತನಾಡಿದ ಜ್ಞಾನೇಂದ್ರ, ಸಾವಿರಾರು ಜನರು ತೀರ್ಥಹಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಧರ್ಮಸ್ಥಳ ನಮ್ಮ ಶ್ರದ್ಧಾ ಕೇಂದ್ರವಾಗಿದೆ. ಅದಕ್ಕೆ ಮಸಿ ಬಳಿಯಲು ಎಡಪಂಥದ ಕುತಂತ್ರಿಗಳು ಹಾಗೂ ಹಲವು ಜನರು ಇದ್ದಾರೆ ಹಾಗಾಗಿ ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಷಡ್ಯಂತ್ರದ ಹಿಂದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕುಮ್ಮಕ್ಕುಗಳು ಅಡಗಿವೆ. ಇದರಲ್ಲಿ ಭಾಗಿಯಾದ ಎಲ್ಲರೂ ಹೊರಗೆ ಬರಬೇಕು. ದೂರು ನೀಡಿದ ಮುಸುದಾರಿಯೇ ಈಗ ತನ್ನ ನಿಲುವನ್ನು ಬದಲಾಯಿಸಿದ್ದಾನೆ. ಎಸ್ಐಟಿ ಅವನು ತಂದ ತಲೆ ಬುರುಡೆಯನ್ನೇ ಎಫ್ ಎಸ್ ಐಎಲ್ ಗೆ ಕೊಟ್ಟಿದ್ದರೆ, ಪೊಲೀಸರಿಗೆ ಗೊತ್ತಿಲ್ಲದೆ ಶವಗಳನ್ನು ಹೂತಿದ್ದರೆ ಅವನೇ ಮೊದಲನೇ ಅಪರಾಧಿಯಾಗುತ್ತಾನೆ. ನಮ್ಮ ಪೊಲೀಸರಿಗೆ ಇವರನ್ನು ಮಟ್ಟ ಹಾಕುವ ಶಕ್ತಿ ಇದೆ. ಇನ್ನು ಮುಂದೆ ಈ ರೀತಿಯ ದೇವಸ್ಥಾನಗಳಿಗೆ ಅಪಪ್ರಚಾರ ಮಾಡುವ ಧೈರ್ಯ ಯಾರಿಗೂ ಬರಬಾರದು ಎಂದು ಹೇಳಿದ್ದಾರೆ.
ಭಾರತದ ಹಿಂದೂ ಸನಾತ ಮೌಲ್ಯಗಳನ್ನು ಅವಮಾನ ಮಾಡುತ್ತಿದ್ದಾರೆ. ಭಾನುವಾರ ನಾವು ಸಾವಿರಾರು ಕಾರುಗಳ ಮೂಲಕ ಧರ್ಮಸ್ಥಳಕ್ಕೆ ಜಾಥಾ ನಡೆಸುತ್ತಿದ್ದೇವೆ. ಈ ಪ್ರಕರಣಕ್ಕೆ ಕೇರಳ ಲಿಂಕ್ ಹಾಗೂ ಎಡಪಂಥೀಯರ ಲಿಂಕ್ ಕೂಡ ಇದೆ. ಕೇರಳ ವಿಧಾನಸಭೆಯಲ್ಲಿ ನಿರ್ಣಯ ಆಗುತ್ತದೆ ಎಂದರೆ ಏನು ಅರ್ಥ? ಅವರಿಗೆ ಇಲ್ಲಿ ಏನು ಕೆಲಸ ಭಕ್ತರಾಗಿ ಅವರು ಬಂದು ಹೋಗಬೇಕಿತ್ತು ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಹೋರಾಟ ಜನಾಂದೋಲನವಾಗಿ ಪರಿವರ್ತನೆಗೊಳ್ಳುತ್ತಿದ್ದು, ಧರ್ಮಸ್ಥಳದ ಆ ಕುಟುಂಬದ ವಿರುದ್ಧ ಈ ಕೆಲಸ ಮಾಡುತ್ತಿದ್ದಾರೆ. ಆ ಕುಟುಂಬದ ಪರ ಈಗ ಜನರಿದ್ದಾರೆ ಅಂತರಾಷ್ಟ್ರೀಯ ಮಟ್ಟದ ಕೈವಾಡ ಈ ಪ್ರಕರಣದಲ್ಲಿ ಕಂಡು ಬಂದಿದೆ. ಹಾಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಿ ತನಿಖೆ ನಡೆಸಬೇಕು ಆಗ ಮಾತ್ರ ನಿಜ ಹೊರಗೆ ಬರುತ್ತದೆ ಎಂದ ಆಗ್ರಹಿಸಿದ್ದಾರೆ.



















