ಬೆಂಗಳೂರು: ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ಪರಿಣಾಮ ಇದೀಗ ಬೆಂಗಳೂರಿನ ಸಾಮಾನ್ಯ ಜನರ ದೈನಂದಿನ ಜೀವನದ ಮೇಲೂ ತೀವ್ರವಾಗಿ ಬೀಳುತ್ತಿದೆ. ಕಮರ್ಷಿಯಲ್ ಗ್ಯಾಸ್ ಹಾಗೂ ಆಟೋಗಳಿಗೆ ಬಳಸುವ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಹೋಟೆಲ್ಗಳು, ಪಿಜಿಗಳು ಹಾಗೂ ಸಾರಿಗೆ ಕ್ಷೇತ್ರದಲ್ಲಿ ಸಂಕಷ್ಟ ಉಂಟಾಗಿದೆ. ಇದರ ನೇರ ಪರಿಣಾಮವಾಗಿ ತರಕಾರಿ ವ್ಯಾಪಾರ ಭಾರೀ ಕುಸಿತ ಕಂಡಿದೆ.
ನಗರದ ಪ್ರಮುಖ ಮಾರುಕಟ್ಟೆಯಾದ ಕೆ.ಆರ್. ಮಾರ್ಕೆಟ್ನಲ್ಲಿ ತರಕಾರಿ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವ್ಯಾಪಾರಿಗಳು ಹೇಳುವಂತೆ, ಗ್ಯಾಸ್ ಕೊರತೆಯಿಂದ ಹೋಟೆಲ್ಗಳು ಮತ್ತು ಪಿಜಿಗಳಲ್ಲಿ ಅಡುಗೆ ಚಟುವಟಿಕೆ ಕುಂಠಿತವಾಗಿದ್ದು, ತರಕಾರಿ ಬೇಡಿಕೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ವ್ಯಾಪಾರದಲ್ಲಿ ಸುಮಾರು 70 ಶೇಕಡಾ ಇಳಿಕೆ ಕಂಡಿದೆ.
ಗ್ಯಾಸ್ ಲಭ್ಯತೆ ಕಡಿಮೆಯಾಗಿರುವುದರಿಂದ ಆಟೋ ಚಾಲಕರಿಗೂ ತೊಂದರೆ ಉಂಟಾಗಿದೆ. ಎಲ್ಪಿಜಿ ಗ್ಯಾಸ್ ಸಿಗದೆ ವಾಹನಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಹೋಟೆಲ್ಗಳು ಮತ್ತು ಪಿಜಿ ನಿವಾಸಿಗಳು ಗ್ಯಾಸ್ ಇಲ್ಲದೆ ಅಡುಗೆ ಮಾಡಲು ಸಾಧ್ಯವಾಗದ ಕಾರಣ ತರಕಾರಿ ಖರೀದಿಯನ್ನು ಕಡಿತಗೊಳಿಸಿದ್ದಾರೆ.
ಇದರಿಂದ ತರಕಾರಿ ದರಗಳಲ್ಲೂ ಭಾರೀ ಇಳಿಕೆ ಕಂಡಿದೆ. ಈರುಳ್ಳಿ ಪ್ರತಿ ಕೆಜಿಗೆ ಸುಮಾರು 20 ರೂಪಾಯಿ, ಆಲೂಗಡ್ಡೆ 15 ರೂಪಾಯಿ ದರಕ್ಕೆ ಇಳಿದಿದೆ. ಕ್ಯಾರೆಟ್, ಬದನೆಕಾಯಿ, ಬೆಂಡೆಕಾಯಿ ಸೇರಿದಂತೆ ಹಲವಾರು ತರಕಾರಿಗಳ ದರಗಳು ಕೂಡ ಕಳೆದ ತಿಂಗಳಿಗಿಂತ ಕಡಿಮೆಯಾಗಿವೆ. ಗಲ್ಫ್ ದೇಶಗಳಿಗೆ ರಫ್ತು ಆಗುತ್ತಿದ್ದ ತರಕಾರಿಗಳು ಈಗ ರಫ್ತು ಆಗದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಸರಕು ಹೆಚ್ಚಾಗಿ, ದರ ಕುಸಿತ ಉಂಟಾಗಿದೆ.
ಈ ಪರಿಸ್ಥಿತಿ ರೈತರು ಮತ್ತು ವ್ಯಾಪಾರಿಗಳಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ವ್ಯಾಪಾರಿಗಳಿಗೂ ವ್ಯಾಪಾರ ಕುಸಿತದಿಂದ ಸಂಕಷ್ಟ ಎದುರಾಗಿದೆ.
ಯುದ್ಧದಿಂದ ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆ ನಗರ ಜೀವನದ ಮೇಲೆ ನೇರ ಪರಿಣಾಮ ಬೀರಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಂಡು ರೈತರು ಮತ್ತು ವ್ಯಾಪಾರಿಗಳಿಗೆ ನೆರವು ಒದಗಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ : ಇಂದು ಹಲವೆಡೆ ಮಳೆ : 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!



















