ಬೆಂಗಳೂರು: ಬಿಜೆಪಿ ನಾಯಕರ ಹಳೆಯ ಹೇಳಿಕೆಗಳು ಹಾಗೂ ವಿಡಿಯೋ ಮುಂದಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರ್. ಅಶೋಕ್ ಅವರದೇ ದಾಟಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕಲಬುರಗಿ ಜಿಲ್ಲೆಗೆ ಕಾಲಿಡದಂತೆ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದ ಹಳೆಯ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಅಂಬೇಡ್ಕರ್ ಸಂವಿಧಾನ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಿಪಬ್ಲಿಕ್ ಆಫ್ ಕಲಬುರ್ಗಿಯ ನಿಜಾಮ ಜನಾಬ್ ಪ್ರಿಯಾಂಕ್ ಖರ್ಗೆ ಅವರು ಹೊರಡಿಸಿರುವ ಫತ್ವಾ ಏನು ಅಂತ ಒಮ್ಮೆ ಕೇಳಿ: “ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲವಂತೆ!” ಜನಾಬ್ ಪ್ರಿಯಾಂಕ್ ಖರ್ಗೆ ಅವರೇ, ಎರಡು ಬಾರಿ ಸಚಿವರಾದ ಮಾತ್ರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ದೊಡ್ಡವರೂ ಅಂದುಕೊಂಡು ಬಿಟ್ಟಿದ್ದೀರಾ? ಅಂಬೇಡ್ಕರ್ ಸಂವಿಧಾನ ಕಲಬುರ್ಗಿಯಲ್ಲಿ ಅನ್ವಯ ಆಗುವುದಿಲ್ಲವೇ? ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಾವೂ ನಿಜಾಮರೂ ಅಲ್ಲ, ತಮ್ಮ ಹಿಂಬಾಲಕರು ರಜಾಕರರೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು ತಾವೂಬ್ಬ ಜನಪ್ರತಿನಿಧಿ, ಜನಸೇವಕ ಅನ್ನೋದನ್ನು ಮರೆಯಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನದ ಕುರಿತು ನೀಡಿದ್ದ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಹಲವು ಬಾರಿ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಆರೋಪಿಸಿದ್ದರು. ಅದೇ ಖರ್ಗೆಯವರು ಅವರ ಜಿಲ್ಲೆಯಲ್ಲೇ ಸಂವಿಧಾನ ಪಾಲನೆ ಮಾಡುವುದಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.