ರಸ್ತೆಯಲ್ಲಿ ಕಸ ಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಕಾಲೇಜು ಉಪನ್ಯಾಸಕನ ಮೇಲೆ ಮೂವರು ಪುಂಡರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಏಪ್ರಿಲ್ 21 ರಂದು ಸಂಜೆ 6 ಗಂಟೆ ಸುಮಾರಿಗೆ ಕೆಎಸ್ ಲೇಔಟ್ ಪಿಸಿಎಸ್ ಪಾರ್ಕ್ ಬಳಿ ಬೈಕ್ ನಲ್ಲಿ ಉಪನ್ಯಾಸಕರು ಹೋಗುತ್ತಿದ್ದರು. ಆ ವೇಳೆ ಪಾರ್ಕ್ ಬಳಿ ರಸ್ತೆ ಬದಿಯಲ್ಲಿ ಆರೋಪಿಗಳಾದ ಭಾನುಪ್ರಸಾದ್, ಶರತ್ ಹಾಗೂ ಅಮೃತ್ ಕುಮಾರ್ ಆಟೋದಿಂದ ಗ್ಲಾಸ್ ಚೂರುಗಳು ಸೇರಿದಂತೆ ಕಸ ಎಸೆಯುತ್ತಿದ್ದರು. ಇದರಿಂದಾಗಿ ಉಪನ್ಯಾಸಕರ ಬೈಕ್ ಸ್ಕೀಡ್ ಆಗಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಯಾಕೆ ಕಸವನ್ನು ಎಸೆಯುತ್ತಿದ್ದೀರಿ ಅಂತ ಪ್ರಶ್ನಿಸಿದ್ದಾರೆ.
ಆಗ ಉಪನ್ಯಾಸಕ ಅರಬಿಂದ್ ಗುಪ್ತಾ ಮೇಲೆ ಕಿಡಿಗೇಡಿಗಳು ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹಲ್ಲೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅರಬಿಂದ್ ಗುಪ್ತ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.