ತಮಿಳುನಾಡು…ಸದಾ ತನ್ನ ರಾಜಕೀಯ ಮೇಲಾಟಗಳಿಂದಲೇ ಸದ್ದು ಮಾಡುವ ನಾಡು. ಕರ್ನಾಟಕದ ಮಗ್ಗುಲಲ್ಲೇ ಇರುವ ತಮಿಳುನಾಡಲ್ಲಿ ದಶಕಗಳಿಂದ ತಮ್ಮದೇ ಸಾಮ್ರಾಜ್ಯ ಕಟ್ಟಿ ಮೆರೆದದ್ದು ಮಾರನ್ ಕುಟುಂಬ. ಹಾಗೆ ನೋಡಿದರೆ ಹಾಲಿ ಸಿಎಂ ಎಂಕೆ ಸ್ಟಾಲಿನ್ ಗೆ ಸಂಬಂಧಿಯಾಗುವ ಈ ಮಾರನ್ ಕುಟುಂಬ, ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಿ ಫ್ಯಾಮಿಲಿ. ಸನ್ ಸಮೂಹವೆನ್ನೋ ದೈತ್ಯ ಕಂಪನಿ ಕಟ್ಟಿ ಸಲುಹುತ್ತಿರುವ ಈ ಮಾರನ್ ಕುಟುಂಬದಲ್ಲೀಗ ಕಂಪನ ಶುರುವಾಗಿದೆ.
ಸನ್ ಘರ್ಷಕ್ಕೆ ಮೂಲ ಕಾರಣವಾದ್ರು ಏನು
ಮಹಾಭಾರತದ ಕಾಲದಿಂದಲೂ ಭಾರತದ ಮಣ್ಣು ದಾಯಾದಿ ಕಲಹಕ್ಕೆ ಸಾಕ್ಷಿಯಾಗುತ್ತಲೇ ಬಂದಿದೆ. ದಕ್ಷಿಣ ಭಾರತದ ಮಾಧ್ಯಮ ದೈತ್ಯ ಸನ್ ಸಮೂಹ ಸಂಸ್ಥೆ ಹೆಸರಲ್ಲೂ ಈಗ ದಾಯಾದಿ ಸಂಘರ್ಷ ಶುರುವಾಗಿದೆ. 1985 ಡಿಸೆಂಬರ್ 18. ಅವತ್ತು ಮುರುಸೋಳಿ ಮಾರನ್ ಅನ್ನೋ ವ್ಯಕ್ತಿ ಸುಮಂಗಲಿ ಪಬ್ಲಿಕೇಷನ್ ಹೆಸರಿನಲ್ಲಿ ಸಾಪ್ತಾಹಿಕವೊಂದನ್ನು ಆರಂಭಿಸಿದ್ರು. ನಿಜಕ್ಕೂ ಅಂದಿಗೆ ಯಾರೊಬ್ಬರೂ ಊಹಿಸಿರಲಿಕ್ಕಿಲ್ಲ. ಯಾಕೆಂದ್ರೆ ಇದೇ ಸುಮಂಗಲಿ ಪಬ್ಲಿಕೇಷನ್ ಭವಿಷ್ಯದಲ್ಲಿ ಸನ್ ಸಮೂಹ ಸಂಸ್ಥೆಯಾಗಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟುತ್ತೆ ಅಂತಾ. ಅವತ್ತು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಕಲಾನಿಧಿ ಮಾರನ್ ಭಾರತಕ್ಕೆ ವಾಪಸ್ ಆಗಿದ್ರು. ಅಮೆರಿಕದಲ್ಲಿನ ಟಿವಿ ವಾಹಿನಿಗಳ ಕ್ರಾಂತಿಯನ್ನು ಅಧ್ಯಯನ ಮಾಡಿದ್ದ ಅವರು, 1990ರಲ್ಲಿ ಪೂಮಲೈ ಅನ್ನೋ ವಿಡಿಯೋ ಜರ್ನಲ್ ನ್ನು ಲಾಂಚ್ ಮಾಡ್ತಾರೆ. ಮುಂದಿನ ಮೂರು ವರ್ಷಗಳ ಬಳಿಕ ಅಂದ್ರೆ 14 ಏಪ್ರಿಲ್ 1993ರಲ್ಲಿ ಮೊದಲ ಬಾರಿ ಸನ್ ಟಿವಿ ಕಿರುತೆರೆಗೆ ಅಪ್ಪಳಿಸಿತು. ಆರಂಭದಲ್ಲಿ ಕೇವಲ 3 ಗಂಟೆಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗ್ತಿತ್ತು. ಈ ಮೂಲಕವೇ ತಮಿಳುನಾಡಿನ ಪ್ರತಿ ಮನೆಯಲ್ಲೂ ಉದಯಿಸೋ ಸೂರ್ಯನ ಎಂಟ್ರಿಯಾಗಿತ್ತು. ಮುಂದೆ 1995ರಲ್ಲಿ ಸನ್ ಟಿವಿ 24 ಗಂಟೆಗಳ ಮನೋರಂಜನಾ ವಾಹಿನಿಯಾಗಿ ದಕ್ಷಿಣ ಭಾರತದ ಮೊದಲ ಪ್ರಾದೇಶಿಕ ವಾಹಿನಿಯಾಗಿ ಕಾರ್ಯಾರಂಭ ಮಾಡಿತು.
ತಂದೆ ಸಾವಿನ ಬೆನ್ನಲ್ಲೇ ಕಲಾನಿಧಿ ಮಾಡಿದ್ರಾ ಗೋಲ್ಮಾಲ್
1995ರಲ್ಲಿ ಹೀಗೆ ಕಿರುತೆರೆ ಜಗತ್ತಿಗೆ ಕಾಲಿಟ್ಟ ಸನ್ ನೆಟ್ ವರ್ಕ್ ನಲ್ಲಿ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಪತ್ನಿ ದಯಾಳು ಅಮ್ಮನ್ ಅವರದ್ದೂ ಶೇಕಡಾ 50ರಷ್ಟು ಪಾಲುದಾರಿಕೆಯಿತ್ತು. ಆದರೆ, 2003ರ ಸೆಪ್ಟಂಬರ್ 23ರಂದು ಮುರಸೋಳಿ ಮಾರನ್ ವಿಧಿವಶರಾದ್ರು. ಅಲ್ಲಿಂದಲೇ ಹೊತ್ತಿತು ಸಹೋದರರ ನಡುವೆ ಸನ್ ಘರ್ಷದ ಕಿಚ್ಚು. ತಂದೆಯ ಡೆತ್ ಸರ್ಟಿಫಿಕೇಟ್ ಕೈಸೇರುವ ಮುನ್ನವೇ ಕಲಾನಿಧಿ ಮಾರನ್, 12 ಲಕ್ಷ ಶೇರ್ ಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2500ಯಿಂದ 3000 ಸಾವಿರ ಮುಖಬೆಲೆಯ ಶೇರುಗಳನ್ನು ಕೇವಲ 10ರ ಮುಖಬೆಲೆಯಲ್ಲಿ ಕಲಾನಿಧಿ ತಮ್ಮ ಹೆಸರಿಗೆ ಅಕ್ರಮವಾಗಿ ವರ್ಗ ಮಾಡಿಕೊಂಡಿದ್ದಾರೆ. ಈ ಮೂಲಕ ತನ್ನ ಸಂಸ್ಥೆಯ ಶೇರುದಾರಿಗೆ 3ರಿಂದ 3500 ಕೋಟಿ ನಷ್ಟ ಮಾಡಿದ್ದಾರೆ ಅಂತಾ ದಯಾನಿಧಿ ಇದೀಗ ಅಪಸ್ವರ ತೆರೆದಿದ್ದಾರೆ. ಅಷ್ಟೇ ಅಲ್ಲಾ ಸನ್ ನೆಟ್ ವರ್ಕನ್ನೇ ಬಂದ್ ಮಾಡಿಸ್ತೀನಿ ಅಂತಾ ಗುಡುಗಿದ್ದಾರೆ.
ಸನ್ ನೆಟ್ ವರ್ಕ್ ಸಾಮ್ರಾಜ್ಯ ಮುಟ್ಟುದೋ ಸುಲಭವಾ
1995ರಲ್ಲಿ ಪ್ರವರ್ಧಮಾನಕ್ಕೆ ಬಂದ ಸನ್ ನೆಟ್ ವರ್ಕ್ ಮುಂದೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಸಾಗಿದ್ದು ಇತಿಹಾಸ. ಇವತ್ತು 37 ಟಿವಿ ವಾಹಿನಿಗಳು, ಸನ್ ಡಿಟಿಹೆಚ್, ರೆಡ್ ಎಫ್ ಎಂ, ಸ್ಪೈಸ್ ಜೆಟ್, ಐಪಿಎಲ್ ಟೀಂ, ಸಿನಿಮಾ ನಿರ್ಮಾಣ ಸಂಸ್ಥೆ ಹೀಗೆ ಸನ್ ನೆಟ್ ವರ್ಕ್ ನ ಕಬಂಧ ಬಾಹುಗಳು ಸಾವಿರಾರು ಕೋಟಿಯ ವಿಶಾಲ ಅಧಿಪತ್ಯದಲ್ಲಿ ಪಸರಿಸಿದೆ. ಈ ಸಾಮ್ರಾಜ್ಯದ ಬುಡವನ್ನೇ ಅಲುಗಾಡಿಸಲು ಇದೀಗ ದಯಾನಿಧಿ ಮುಂದಾಗಿದ್ದಾರೆ. ಶೇರು ಅಕ್ರಮ ವರ್ಗಾವಣೆ ಸೇರಿದಂತೆ ದಯಾಳು ಅಮ್ಮನ್ ಹೆಸರಿನಲ್ಲಿದ್ದ 20 ಪ್ರತಿಷತ ಶೇರುಗಳನ್ನು 3173 ರೂಪಾಯಿಂತೆ ಕಲಾನಿಧಿ ಖರೀಸಿದ್ದಾರೆ. ಈ ಮೂಲಕ ಸಂಸ್ಥೆಯ ಶೇಕಡಾ 75ರಷ್ಟು ಪಾಲು ಅವರ ಬಳಿಯಿದೆ. ಆದ್ರೆ ದಯಾಳು ಅಮ್ಮನ್ ರಿಂದ ಖರೀದಿಸಿದ ಶೇರುಗಳಲ್ಲೇ ಅಕ್ರಮ ನಡೆದಿದ್ದು, ಮಾರುಕಟ್ಟೆ ಮೌಲ್ಯಯಕ್ಕಿಂತ ಕಡಿಮೆ ಬೆಲೆಗೆ ಈ ವಹಿವಾಟು ನಡೆದಿದೆ ಅಂತಲೂ ದಯಾನಿಧಿ ದೂರಿದ್ದಾರೆ. ಈ ತಪ್ಪನ್ನ ಕಲಾನಿಧಿ ಶೀಘ್ರವೇ ಸರಿಪಡಿಸಿಕೊಳಬೇಕು. ಇಲ್ಲದಿದ್ರೆ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಸನ್ ನೆಟ್ ವರ್ಕ್ ಇದು 22 ವರ್ಷಗಳ ಹಳೆಯ ರಗಳೆ, ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಬೇಡ ಎಂದಿದೆ. ಒಟ್ನಲ್ಲಿ, ತಮಿಳುನಾಡಿನ ಪ್ರತಿಷ್ಠಿತ ಕುಟುಂಬದ ದಾಯಾದಿ ಕಲಹ ಈಗ ಬೀದಿಗೆ ಬಂದಿದೆ.