ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂ ̤4 ರಿಂದ ನಂದಗೋಕುಲ ಧಾರಾವಾಹಿ ತೆರೆಕಾಣಲಿದ್ದು, ಸೀರಿಯಲ್ ತಂಡ ಸುದ್ಧಿಗೋಷ್ಠಿಯನ್ನು ಆಯೋಜಿಸಿತ್ತು. ಈಗಾಗಲೇ ಈ ಸೀರಿಯಲ್ ನ ಮೊದಲ ಪ್ರೋಮೋ ರಿಲೀಸ್ ಆಗಿದೆ.

ಸುದ್ದಿಗೋಷ್ಠಿಯಲ್ಲಿ ನಂದಗೋಕುಲ ಧಾರಾವಾಹಿ ನಿರ್ದೇಶಕ ಶ್ರವಂತ್ ಮಾತನಾಡಿ, ಎರಡು ಕುಟುಂಬಗಳ ಮಧ್ಯೆ ನಡೆಯುವ ಕಥೆ ಇದು. ಭಾವನೆಗಳನ್ನು ತುಂಬಿಕೊಂಡಿರುವ ಕಥೆಯೇ ನಂದಗೋಕುಲ. ನಮ್ಮ ಜೀವನದಲ್ಲಿ ನಡೆಯುವ ಕಥೆಯೇ ಇದು. ಹತ್ತು ವರ್ಷದಿಂದ ತುಂಬಾ ದೊಡ್ಡ ಕನಸುಗಳನ್ನು ಹೊತ್ತು ಸಾಗಿರುವೆ ಎಲ್ಲರ ಬೆಂಬಲವಿರಲಿ ಎಂದರು.
ನಟಿ ರಾಧಿಕಾ ಶ್ರವಂತ್ ಮಾತನಾಡಿ, ನನ್ನ ಗಂಡ ಬಹಳ ವರ್ಷಗಳಿಂದ ಈ ಸೀರಿಯಲ್ ಕನಸು ಕಂಡಿದ್ದರು. ಬಹಳ ಕಷ್ಟ ಪಟ್ಟು ಈ ಧಾರಾವಾಹಿ ತೆರೆಗೆ ತರಲು ಹಠ ತೊಟ್ಟಿದ್ದಾರೆ ಎಂದು ಹೇಳಿದರು.

ನಟ ಅರವಿಂದ ರಾವ್ ಮಾತನಾಡಿ, ನನ್ನದು ನಂದಕುಮಾರ್ ಎಂಬ ಪಾತ್ರ. ಕಿರುತೆರೆಯಿಂದಲೇ ನಾನು ಇಂಡಸ್ಟ್ರಿಗೆ ಬಂದೆ. ಹಿರಿಯ ನಿರ್ದೇಶಕರ ಕೈ ಕೆಳಗೆ ನಾನು ಕೆಲಸ ಮಾಡಿರುವೆ. ನಂದಕುಮಾರನ ಪಾತ್ರ ಛಾಪು ಮೂಡಿಸಲಿದೆ. ಒಬ್ಬ ಕಲಾವಿದನ ಹಿಂಡುವ ನಿರ್ದೇಶಕ ಬೇಕು..ಹಾಗಾಗಿ, ಶ್ರವಂತ್ ಕಥೆ ಹೇಳಿದಾಗ ಒಪ್ಪಿಕೊಂಡೆ. ಇಂದು ಕೂಡು ಕುಟುಂಬ ಎನ್ನುವುದು ಎಲ್ಲಿಯೂ ಕಾಣುತ್ತಿಲ್ಲ. ಇದು ಪ್ರತಿಯೊಂದು ಅಪ್ಪನ ಕಥೆ ಎಂದರು.

ಪೋಷಕ ನಟಿ ಪಾತ್ರಧಾರಿ ಅಮೃತಾ ನಾಯ್ಡು ಮಾತನಾಡಿ, ನಾನು ಗಿರಿಜಾ ಎನ್ನುವ ಪಾತ್ರ ನಿರ್ವಹಿಸುತ್ತಿದ್ದೇನೆ. ಎಲ್ಲರ ಮನೆಯ ಗೃಹಿಣಿಯ ಪಾತ್ರ ಮಾಡುತ್ತಿದ್ದೇನೆ ಎಂದರು.
ನಟ ರವಿಚೇತನ್ ಮಾತನಾಡಿ, ನನಗೆ ಬಹಳ ಸೀರಿಯಲ್ ಗೆ ಅವಕಾಶ ಬರುತ್ತಿತ್ತು. ಆದರೆ ಈ ಸೀರಿಯಲ್ ಒಪ್ಪಿಕೊಂಡೆ. ಇಲ್ಲಿ ಸೂರ್ಯಕಾಂತ್ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಫ್ಯಾಮಿಲಿಯ ಬಗ್ಗೆ ಇರುವ ಬಾಂಧವ್ಯದ ಕುರಿತಾಗಿ ಈ ಕಥೆಯಿದೆ ಎಂದರು. ಈ ವೇಳೆ ನಂದಗೋಕುಲ ಧಾರಾವಾಹಿ ಕಲಾವಿದರು ಭಾಗಿಯಾಗಿದ್ದರು.