ಬೆಂಗಳೂರು: ಉಚಿತ ಯೋಜನೆಯಿಂದ ರಾಜ್ಯ ಸರ್ಕಾರ ತೀವ್ರ ನಷ್ಟಕ್ಕೆ ಈಡಾಯಿತೇ ಎಂಬ ಪ್ರಶ್ನೆಯೊಂದು ಮೂಡುತ್ತಿದ್ದು, ಸಾಲ ಪಡೆಯಲು ಸಾರಿಗೆ ಇಲಾಖೆ ಮುಂದಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಈಗಾಗಲೇ ಸಾಲ ಪಡೆಯುವುದಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 2 ಸಾವಿರ ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಲಾಗಿದೆ. ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಭವಿಷ್ಯ ನಿಧಿ ಬಾಕಿ ಇದೆ. ಸಾರಿಗೆ ನಿಗಮ ಇಂಧನ ಬಾಕಿ ಹೊಣೆಗಾರಿಕೆ ಉಳಿದಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣ ಪಾವತಿಗೆ 4 ಸಾರಿಗೆ ನಿಗಮಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರ ಅನುಮೋದನೆ ನೀಡಿದೆ. ಬಾಕಿ ಹೆಚ್ಚು ಉಳಿದ ಹಿನ್ನೆಲೆಯಲ್ಲಿ ಸಾಲ ಪಡೆಯಲು ಅನುಮತಿ ಕೋರಿ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಸಾಲ ಪಡೆಯಲು ಸರ್ಕಾರದಿಂದ ಷರತ್ತುಬದ್ಧ ಖಾತರಿ ವಿಧಿಸಿದೆ.
ಈ ಪ್ರಸ್ತಾವನೆಯಲ್ಲಿ ಹಲವು ಅಂಶಗಳನ್ನು ಸಾರಿಗೆ ಇಲಾಖೆ ಉಲ್ಲೇಖಿಸಿದೆ. ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದೆ. ಆದರೆ ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿವೆ. ನಗದು ಹರಿವಿನಲ್ಲಿ ಕೊರತೆ ಉಂಟಾಗಿರುತ್ತದೆ. ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗದೀಕರಣ, ಇಂಧನ ಸರಬರಾಜುದಾರರ ಬಾಕಿ ಉಳಿದಿದೆ. ಅಪಘಾತ ಪರಿಹಾರ ಪ್ರಕರಣಗಳು, ನಿವೃತ್ತರಿಗೆ ಪರಿಷ್ಕೃತ ಉಪಧನ, ಸಾಲವೂ ಸೇರಿದಂತೆ ನ. 2024ರ ಅಂತ್ಯಕ್ಕೆ ಒಟ್ಟು 6330.25 ಕೋಟಿ ರೂ. ಬಾಕಿ ಉಳಿದಿದೆ. ಹೀಗಾಗಿ ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆ ಪಾವತಿ ಮಾಡಲು ಒಟ್ಟು 5527.46 ಕೋಟಿ ರೂ.ಗಳ ಅವಶ್ಯಕತೆ ಇದೆ. ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ 2901.53 ಕೋಟಿ ರೂ. ಇದೆ. ಇಂಧನದ ಬಾಕಿ ಮೊತ್ತ 827.37 ಕೋಟಿ ರೂ. ಸೇರಿ ಒಟ್ಟು 3728.90 ಕೋಟಿ ರೂ.ಗಳ ಸಾಲದ ಅವಶ್ಯಕತೆ ಇದೆ. ಈ ಸಾಲದ ಮರುಪಾವತಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವು ಭರಿಸುವಂತೆ ಕೋರಿದೆ. ಸಾರಿಗೆ ಇಲಾಖೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಅನುಮೋದಿಸಿದೆ. 2000 ಕೋಟಿ ರೂ. ಸಾಲ ಪಡೆಯಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ.ಹೀಗಾಗಿ ಸಾಲ ಪಡೆಯಲು ಸಾರಿಗೆ ಇಲಾಖೆ ಮುಂದಾಗಿದೆ.