ನವದೆಹಲಿ : ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲಿ ಜನವರಿ 24, 2026 ಒಂದು ಕರಾಳ ದಿನವಾಗಿ ದಾಖಲಾಗಿದೆ. ಒಂದೆಡೆ ಐಸಿಸಿ ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶವನ್ನು ಅಧಿಕೃತವಾಗಿ ಕೈಬಿಟ್ಟು ಸ್ಕಾಟ್ಲೆಂಡ್ಗೆ ಅವಕಾಶ ನೀಡುವ ಮೂಲಕ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ದೊಡ್ಡ ಮುಖಭಂಗವುಂಟಾಗಿದೆ. ಆದರೆ, ಇದೇ ದಿನದಂದು ನಾಟಕೀಯ ಬೆಳವಣಿಗೆಯೊಂದರಲ್ಲಿ, ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ರಾಷ್ಟ್ರೀಯ ತಂಡಕ್ಕೆ ಮರಳಲು ಅರ್ಹರು ಎಂದು ಬಿಸಿಬಿ ಘೋಷಿಸಿದೆ. ವಿಶ್ವಕಪ್ನಿಂದ ಹೊರಬಿದ್ದ ನೋವನ್ನು ಮರೆಮಾಚಲು ಮಂಡಳಿ ಈ ‘ಶಕೀಬ್ ಕಾರ್ಡ್’ ಅನ್ನು ಬಳಸಿತೇ ಎಂಬ ಅನುಮಾನ ಇದೀಗ ಹುಟ್ಟಿಕೊಂಡಿದೆ.
ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿದ ಹಠಮಾರಿ ಧೋರಣೆಯಿಂದಾಗಿ ಬಾಂಗ್ಲಾದೇಶ ವಿಶ್ವಕಪ್ ಅವಕಾಶ ಕಳೆದುಕೊಂಡಿತು. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಸುಮಾರು ಒಂದೂವರೆ ವರ್ಷಗಳಿಂದ ಸ್ವದೇಶಕ್ಕೆ ಕಾಲಿಡಲು ಸಾಧ್ಯವಾಗದ ಶಕೀಬ್ ಅಲ್ ಹಸನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲು ವೇದಿಕೆ ಕಲ್ಪಿಸುವ ಮಾತುಗಳು ಕೇಳಿಬಂದಿವೆ.
ದಿಢೀರ್ ‘ಯೂ-ಟರ್ನ್’ ಹೊಡೆದ ಬಿಸಿಬಿ ನಿರ್ದೇಶಕ
ಕೆಲವೇ ದಿನಗಳ ಹಿಂದೆ ಬಿಸಿಬಿ ನಿರ್ದೇಶಕ ಆಸಿಫ್ ಅಕ್ಬರ್ ಅವರು, “ಶಕೀಬ್ ಅಲ್ ಹಸನ್ ತಂಡಕ್ಕೆ ಮರಳಬೇಕಾದರೆ ತಮ್ಮ ರಾಜಕೀಯ ನಿಲುವಿನ ಬಗ್ಗೆ ಪಶ್ಚಾತ್ತಾಪ ಪಡಬೇಕು ಮತ್ತು ಕ್ಷಮೆಯಾಚಿಸಬೇಕು,” ಎಂದು ಕಟುವಾಗಿ ನುಡಿದಿದ್ದರು. ಆದರೆ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಅವರೇ ಕುಳಿತು, “ಶಕೀಬ್ ಫಿಟ್ ಆಗಿದ್ದರೆ ಮತ್ತು ಲಭ್ಯವಿದ್ದರೆ ಅವರು ಆಡಬಹುದು,” ಎಂದು ಹೇಳಿಕೆ ನೀಡಿದ್ದಾರೆ. ಈ ವಿರೋಧಾಭಾಸದ ಹೇಳಿಕೆಗಳು ಮಂಡಳಿಯ ಉದ್ದೇಶದ ಬಗ್ಗೆ ಸಂಶಯ ಮೂಡಿಸಿವೆ.
“ಇದು ಕೇವಲ ಪ್ರಚಾರದ ಗಿಮಿಕ್”
ಈ ಬಗ್ಗೆ ಇಂಡಿಯಾ ಟುಡೇ ಜೊತೆ ಮಾತನಾಡಿರುವ ಹಿರಿಯ ಪತ್ರಕರ್ತ ಆರಿಫುಲ್ ಇಸ್ಲಾಂ ರೋನಿ, ಬಿಸಿಬಿ ನಡೆ ಒಂದು ‘ಹಾಸ್ಯಾಸ್ಪದ ನಾಟಕ’ ಎಂದು ಜರಿದಿದ್ದಾರೆ. “ಶಕೀಬ್ ಅವರ ರಾಜಕೀಯ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರು ಇನ್ನೂ ಅವಾಮಿ ಲೀಗ್ ರಾಜಕಾರಣದಲ್ಲಿದ್ದಾರೆ. ಹೀಗಿರುವಾಗ ಮಂಡಳಿ ಇದ್ದಕ್ಕಿದ್ದಂತೆ ಅವರ ಸಂಪರ್ಕದಲ್ಲಿದ್ದೇವೆ ಎನ್ನುತ್ತಿರುವುದು ಕೇವಲ ಜನರ ಗಮನವನ್ನು ವಿಶ್ವಕಪ್ ಸೋಲಿನಿಂದ ಬೇರೆಡೆ ಸೆಳೆಯುವ ತಂತ್ರವಷ್ಟೇ. ಶಕೀಬ್ ಅವರನ್ನು ಒಂದು ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಸಿಬಿಯಲ್ಲಿ ಆಂತರಿಕ ಕಲಹ?
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರಸ್ತುತ ತೀವ್ರ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಿರ್ದೇಶಕ ಇಶಿಯಾಕ್ ಸಾದಿಕ್ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಮತ್ತೊಬ್ಬ ನಿರ್ದೇಶಕ ಮೊಖ್ಲೆಸೂರ್ ರೆಹಮಾನ್ ಶಮೀಮ್ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಸುಳಿಗೆ ಸಿಲುಕಿ ಲೆಕ್ಕಪರಿಶೋಧನಾ ಸಮಿತಿಯಿಂದ ಕೆಳಗಿಳಿದಿದ್ದಾರೆ. ಐಸಿಸಿ ಸಭೆಯಲ್ಲಿ 16 ರಲ್ಲಿ 14 ಮತಗಳನ್ನು ಕಳೆದುಕೊಂಡು ಕ್ರಿಕೆಟ್ ರಾಜತಾಂತ್ರಿಕತೆಯಲ್ಲೂ ಬಾಂಗ್ಲಾ ಸೋತಿದೆ. ನಿರ್ದೇಶಕರ ನಡುವಿನ ಜಗಳ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಶಕೀಬ್ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆಯಾಗಿ, ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ಕಂಡ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಘನತೆಯನ್ನು ಗೌರವಿಸಿ ಗೌರವಯುತ ವಿದಾಯ ನೀಡುವ ಬದಲು, ಮಂಡಳಿಯ ವೈಫಲ್ಯಗಳನ್ನು ಮುಚ್ಚಿಹಾಕಲು ಅವರನ್ನು ಒಂದು ‘ಗುರಾಣಿ’ಯಂತೆ ಬಳಸಿಕೊಳ್ಳುತ್ತಿರುವುದು ದುರಂತವೇ ಸರಿ.
ಇದನ್ನೂ ಓದಿ : ಪೌರಾಯುಕ್ತೆಗೆ ಧಮ್ಕಿ ಹಾಕಿ ಪರಾರಿಯಾಗಿದ್ದ ರಾಜೀವ್ ಗೌಡ ಕೊನೆಗೂ ಅರೆಸ್ಟ್!



















