ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸೀತಾರಾಮಚಂದ್ರ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಿತು. ರಾಮಕ್ಷತ್ರಿಯ ಸಂಘದ ವತಿಯಿಂದ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ನಡೆಯಿತು.
ಕಲ್ಯಾಣೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೇವತಾ ಪ್ರಾರ್ಥನೆ ಕರ್ಮಾರಂಭ ಧ್ವಜಾರೋಹಣ ನಡೆಯಿತು. ಅಲ್ಲದೇ, ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಸ್ವರ್ಣವಲ್ಲಿ ಮಠಾದೀಶ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ, ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ, ವಿದ್ವಾನ್ ವೆ. ಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಸೀತಾರಾಮಚಂದ್ರ ಕಲ್ಯಾಣೋತ್ಸವವು ಸಂಭ್ರಮ ನಡೆಯಿತು. ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ದೇವಸ್ಥಾನವನ್ನು ಹೂವಿನಿಂದ ಅಲಂಕಾರಗೊಳಿಸಲಾಗಿತ್ತು. 18ನೇ ವರ್ಷದ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರು ದಿ. ಸುಬ್ರಾಯ ನಾಯ್ಕ ಮತ್ತು ದಿ. ವಿಲಾಸಿನಿ ನಾಯ್ಕ ದೊಡ್ಡನಾಯ್ಕರಮನೆ ಪಡುವರಿ ಅವರ ಸ್ಮರಣಾರ್ಥ ಗಾಯತ್ರಿ ಮತ್ತು ಕಮಾಂಡರ್ ರಾಜೇಶ ಸುಬ್ರಾಯ ನಾಯ್ಕ, ಮಕ್ಕಳು ದೊಡ್ಡನಾಯ್ಕ ಕುಟುಂಬಸ್ಥರು ಪಡುವರಿ ಹಾಗೂ ಕಾರವಾರದ ಆಶಾ ಮತ್ತು ಗೋಪಾಲಕೃಷ್ಣ ನಾಯ್ಕ,ಮಕ್ಕಳು, ಸರೋಜಿನಿ, ಎಂ. ಗಣಪತಿ ಮಾಪಾರಿಮನೆ ಕುಟುಂಬಸ್ಥರು ಸೇವೆಗೈದರು. ಈ ವೇಳೆ ರಾಮಕ್ಷತ್ರಿಯ ಸಂಘದ ಆಡಳಿತ ಮಂಡಳಿ ಸದಸ್ಯ ರಾಮಕೃಷ್ಣ ಸಿ ಸೇರಿದಂತೆ ಹಲವರು ಇದ್ದರು.