ಬೆಂಗಳೂರು : ರಾಜ್ಯದಲ್ಲಿ ಜಿಪಂ ಹಾಗೂ ತಾಪಂಗಳಿಗೆ ಮೀಸಲು ನಿಗದಿಪಡಿಸುವ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ನಾಲ್ಕು ವಾರ ಸಮಯಾವಕಾಶ ನೀಡಿದೆ.
ರಾಜ್ಯದ ಎಲ್ಲಾ ಜಿ.ಪಂ ಹಾಗೂ ತಾಪಂಗಳಿಗೆ 12 ವಾರಗಳಲ್ಲಿ ಮೀಸಲು ಅಂತಿಮಗೊಳಿಸಲಾಗುವುದು ಎಂದು ಸರಕಾರ 2023 ರ ಡಿ. 19 ರಂದು ಹೈಕೋರ್ಟ್ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ಅದರಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ 6 ತಿಂಗಳಾದರೂ ಸರಕಾರ ಮೀಸಲು ಅಂತಿಮಗೊಳಿಸಿಲ್ಲ. ಆದರೂ ಸಮಯಾವಕಾಶ ಕೇಳುತ್ತ ಮುಂದೂಡುತ್ತಲೇ ಇತ್ತು.
ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟಿಸಲು ಏಕಸದಸ್ಯ ಪೀಠದ ಆದೇಶ ಪಾಲಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಸಲ್ಲಿಸಿರುವ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ‘ಜಿ.ಪಂ, ತಾ.ಪಂ.ಗಳಿಗೆ ಮೀಸಲು ಅಂತಿಮಗೊಳಿಸಲು ನಾಲ್ಕು ವಾರ ಕಾಲಾವಕಾಶಬೇಕು. ಕನಿಷ್ಠ ಜನವರಿ ಮೊದಲ ವಾರದವರೆಗೆ ಸಮಯಬೇಕು ಎಂದು ಕೇಳಿದರು. ವಾದ -ವಿವಾದ ಆಲಿಸಿದ ಕೋರ್ಟ್ ಡಿ. 12ಕ್ಕೆ ವಿಚಾರಣೆ ಮುಂದೂಡಿದೆ. ಸದ್ಯ ಇದನ್ನು ಗಮನಿಸಿದರೆ, ಮುಂದಿನ ವರ್ಷ ಚುನಾವಣೆ ನೀಡುವ ಸಾಧ್ಯತೆ ಇದೆ.