ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಮರ್ಡರ್ ಕೇಸ್ವೊಂದನ್ನು ಭೇದಿಸಿದ್ದಾರೆ. ‘ನನ್ನನ್ನ ಹಿಡಿಯೋಕೆ ಸಾಧ್ಯವೇ ಇಲ್ಲʼ ಅಂತಾ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ಹತ್ಯೆ ಆರೋಪಿಯನ್ನ ಕೊನೆಗೂ ಖೆಡ್ಡಾಗೆ ಕೆಡವಿದ್ದಾರೆ. ಪೊಲೀಸರ ಇನ್ವೆಸ್ಟಿಗೇಷನ್ ಮಾತ್ರ ಸಖತ್ ಥ್ರಿಲ್ಲಿಂಗ್ ಆಗಿದೆ.

ಜೂನ್ 2 ರಂದು ಕಡೂರಿನ ರೈಲ್ವೆ ಹಳಿ ಮೇಲೆ ಸುಟ್ಟ ಸ್ಥಿತಿಯಲ್ಲಿ ಮನುಷ್ಯನ ಬಲಗಾಲು ಪತ್ತೆ ಆಗಿತ್ತು. ʻಇದು ಯಾರ ಕಾಲು.? ಇನ್ನುಳಿದ ಮೃತದೇಹ ಎಲ್ಲಿದೆ..?ʼ ಅಂತಾ ಹಲವು ಪ್ರಶ್ನೆಗಳನ್ನು ಎದುರಿಗೆ ಹರವಿಕೊಂಡು ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಅಸಲಿಯಾಗಿ ಒಂಟಿ ಕಾಲು ಕೇಸ್ ಪೊಲೀಸರಿಗೆ ಬಿಗ್ ಚಾಲೆಂಜ್ ಆಗಿತ್ತು.

ಅದೇ ವೇಳೆಗೆ ಕಡೂರಿನ ಕಂಸಾಗರ ಗ್ರಾಮದ ಸಮೀಪದ ನರ್ಜನ ಪ್ರದೇಶದಲ್ಲಿ ಬಹುತೇಕ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊದು ಪತ್ತೆಯಾಗಿತ್ತು. ಆದಾಗಲೇ 2 ಟೀಂ ಮಾಡಿಕೊಂಡು ಪೊಲೀಸರು ಫೀಲ್ಡ್ಗೆ ಇಳಿದಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರನ್ನು ಮಿಸ್ಸಿಂಗ್ ಕಂಪ್ಲೇಂಟ್ವೊಂದು ಸೆಳೆದಿತ್ತು. ಕಡೂರು ಠಾಣೆಯಲ್ಲೇ ಜೂನ್ 2ರಂದು ಸುಬ್ರಮಣ್ಯ ಎನ್ನುವರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಅದೇ ದಿನ ಮೃತದೇಹ ಸಿಕ್ಕಿದ್ದರಿಂದ ಪರಿಶೀಲನೆ ನಡೆಸಿ. ದೂರು ನೀಡಿದ್ದ ಸುಬ್ರಮಣ್ಯ ಪತ್ನಿಗೆ ತೋರಿಸಿದ್ದರು. ಬಳಿಕ ಮತದೇಹ ಸುಬ್ರಹ್ಮಣ್ಯನದ್ದೇ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು.
ಆದರೂ ಕೊಲೆಗಾರ ಯಾರು ಎಂಬುವುದು ಮಾತ್ರ ಗೊತ್ತಾಗಿರಲಿಲ್ಲ. ಮೃತ ಸುಬ್ರಹ್ಮಣ್ಯ ಪತ್ನಿ ಕೊಟ್ಟ ಸುಳಿವು ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಸಹಕಾರಿ ಆಗಿತ್ತು. ಕೊಲೆಗಾರ ಪ್ರದೀಪ್ ಎಂಬುದು ಗೊತ್ತಾಗಿತ್ತು.
8 ತಿಂಗಳ ಹಿಂದೆ ಮೃತ ಸುಬ್ರಹ್ಮಣ್ಯ ಮನೆಯನ್ನು ಕಟ್ಟಿ ಕೊಡಲು ಪ್ರದೀಪ್ ಎಂಬಾತ ಗುತ್ತಿಗೆ ಪಡೆದಿದ್ದ. ಮನೆ ಕಟ್ಟುತ್ತ ಸುಬ್ರಮಣ್ಯ ಪತ್ನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಇದು ಸುಬ್ರಹ್ಮಣ್ಯ ಗಮನಕ್ಕೆ ಬಂದು ಪ್ರದೀಪ್ಗೆ ಎಚ್ಚರಿಕೆ ಕೊಟ್ಟು ಅಕ್ರಮ ಸಂಬಂಧಕ್ಕೂ ಬ್ರೇಕ್ ಹಾಕಿದ್ದರು. ಇದೇ ದ್ವೇಷದಿಂದ ಆರೋಪಿ ಪ್ರದೀಪ್, ಓಮ್ನಿ ಕಾರಿನಲ್ಲಿ ಸುಬ್ರಹ್ಮಣ್ಯರನ ಕರೆದೊಯ್ದು ಹತ್ಯೆ ಮಾಡಿ ದೇಹವನ್ನ ಸುಟ್ಟು ಹಾಕಿದ್ದಾನೆ. ಅಂಶಗಳೆಲ್ಲಾ ಪೊಲೀಸ್ ತನಿಖೆಯಲ್ಲಿ ಬಯಲಾಗಿವೆ.
ಸುಬ್ರಹ್ಮಣ್ಯನನ್ನು ಸುಟ್ಟ ಹಾಕಿದ ನಂತರ ಆರೋಪಿ ಪ್ರದೀಪ ಬಿಂದಾಸ್ ಆಗಿ ಓಡಾಡಿಕೊಂಡಿದ್ದ. ದೇಹನೇ ಸುಟ್ಟು ಹಾಕಿದ್ದೀನಿ ಸಾಕ್ಷಿ ಸಿಗೋಕೆ ಸಾಧ್ಯನೇ ಇಲ್ಲ ಅಂತಾ ತನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದ. ಆದರೆ, ಯಾವ್ದೋ ಪ್ರಾಣಿಯೊಂದು ಸುಬ್ರಹ್ಮಣ್ಯ ಕಾಲಿನ ಭಾಗವೊಂದನ್ನು ರೈಲ್ವೆ ಹಳಿ ಬಳಿ ಎಳೆದು ತಂದು ಬಿಟ್ಟಿದೆ. ಅದೇ ಒಂಟಿ ಕಾಲಿನಿಂದ ಮರ್ಡರ್ ಕಹಾನಿ ಬಿಚ್ಚಿಕೊಂಡಿದೆ. ಸದ್ಯ ಆರೋಪಿ ಪ್ರದೀಪ್ ಜೊತೆ ಈತನಿಗೆ ಸಹಕರಿಸಿ ಇನ್ನಿಬ್ಬರನ್ನೂ ಬಂಧಿಸಿ ಕೈಗೆ ಕೋಳ ತೊಡಿಸಿ ಜೈಲಿಗಟ್ಟಿದ್ದಾರೆ.