ಬೆಂಗಳೂರು: ಪ್ರಿಯಾಂಕ್ ಖರ್ಗೆ ಇರಲಾರದೆ ಇರುವೆ ಬಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಈಗ ದಲಿತ ಸಂಘಟನೆಗಳು ನೆನಪಾಗಿವೆ. ದಲಿತರನ್ನ ಹಾಳು ಮಾಡಿದವರು ಯಾರಾದರೂ ಇದ್ದರೆ ಅದು ಖರ್ಗೆ ಕುಟುಂಬ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಿಯಾಂಕ್ ಖರ್ಗೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಛಲವಾದಿ, ಗುರುಮಠಕಲ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ 9 ಬಾರಿ ಗೆದ್ದಿದ್ದಾರೆ. ಅಲ್ಲಿ ಒಬ್ಬ ದಲಿತ ನಾಯಕನನ್ನು ಬೆಳೆಸಿಲ್ಲ, ಬೆಳೆಯಲು ಬಿಟ್ಟಿಲ್ಲ, ಮೀಸಲು ಕ್ಷೇತ್ರವನ್ನೂ ಬೇರೆ ಯಾವ ದಲಿತರಿಗೂ ಬಿಟ್ಟುಕೊಟ್ಟಿಲ್ಲ. ನಾನು ಇದನ್ನ ಉ ಕಲ್ಪಿತವಾಗಿ ಹೇಳುತ್ತಿಲ್ಲ, ಅನುಭವದಿಂದ ಹೇಳುತ್ತಿದ್ದೇನೆ. ನಾನೇ 25 ವರ್ಷ ಅವರ ಜೊತೆಲಿದ್ದೆ, ಸಮಾದಿಯಾಗುವ ಮುನ್ನ ಬಿಜೆಪಿಗೆ ಬಂದು ಬಚಾವಾದೆ. ದಲಿತರೇ ನೀವು ಕಾಂಗ್ರೆಸ್ ಪರವಾಗಿ ನಿಂತರೇ ಅಂಬೇಡ್ಕರ್ ವಿರೋಧಿಗಳಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಿನ್ನೆ ನೆಲಮಂಗಲದಲ್ಲಿ ಒಂದು ಮನೆಗೆ ನುಗ್ಗಿ ಸಾಮೂಹಿಕ ಅತ್ಯಾ೧ಚಾರ ಆಗಿದೆ. ದಸರಾ ಸಂದರ್ಭದಲ್ಲೇ ಮೈಸೂರಿನಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾ೧ಚಾರ, ಭೀಕರ ಕೊಲೆ ಆಗಿದೆ. ಕಲಬುರಗಿಯಿಂದ ಬಂದಿದ್ದ ಆ ಕುಟುಂಬಕ್ಕೆ ಯಾವೊಬ್ಬ ಸಚಿವನೂ ಸಾಂತ್ವನ ಹೇಳಲಿಲ್ಲ. ನ್ಯಾಯ ಕೊಡಿಸುವ ಭರವಸೆ ನೀಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಿಡಿಗೇಡಿಗಳಿಗೆ ಪೊಲೀಸರ ಮೇಲೆಯೂ ಭಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಂಗನವಾಡಿ ಟೀಚರ್ ಗಳಿಗೆ, ಲೈಬ್ರರಿ ಮೇಲ್ವಿಚಾರಕರಿಗೆ, ನೀರುಗಂಟಿಗಳಿಗೆ ಈ ಸರ್ಕಾರ ಸಂಬಳ ನೀಡಿಲ್ಲ. ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತೋ ಆಗಿನಿಂದ ರಾಜ್ಯಕ್ಕೆ ದರಿದ್ರ ಬಂದಿದೆ, ಈ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಎರಡುವರೆ ವರ್ಷ ರಾಜ್ಯದ ಜನತೆ ಇದನ್ನು ಅನುಭವಿಸಬೇಕಿದೆ. ಜನರು ತಡೆದುಕೊಳ್ಳಬೇಕಾ? ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ. ಈ ಸರ್ಕಾರಕ್ಕೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ಕಾಂಗ್ರೆಸ್ ಸರ್ಕಾರ ಮಾತೆತ್ತಿದರೆ ಮತಕಳ್ಳತನ ಎನ್ನುತ್ತಿದೆ. 136 ಸೀಟ್ ಗೆದ್ದಿರುವುದು ನೀವು, ಓಟ್ ಚೋರಿ ಮಾಡಿರೋದೇ ನೀವು. ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆರ್ಎಸ್ಎಸ್ ವಿಚಾರ ಚರ್ಚೆ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಅಮವ್ಯಾಸೆ, ಹುಣ್ಣಿಮೆ ವ್ಯತ್ಯಾಸ ಗೊತ್ತಿಲ್ಲ. ನಮ್ಮ ಸಂಸದರನ್ನು ಸಿಎಂ ಅಮವ್ಯಾಸೆ ಸೂರ್ಯ ಎಂದು ಹೇಳುತಾರೆ. ಕಾಂಗ್ರೆಸ್ ಪಾಲಿಗೆ ಸೂರ್ಯ ಇಲ್ಲ, ಅದಕ್ಕೆ ರೋಗ ರುಜಿನ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.



















