ಹಾಸನ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗ ನಡೆದಿದೆ.
ವಿಜಯಕುಮಾರ್ (46) ಕೊಲೆಯಾದ ಕಂಟ್ರಾಕ್ಟರ್ ಎನ್ನಲಾಗಿದೆ. ಅರಸೀಕೆರೆ ಪಟ್ಟಣದ ಕೆಎಸ್ಆರ್ಟಿಸಿ ಡಿಪೋ ಬಳಿ ನೂತನ ಕಟ್ಟಡ ಕಂಟ್ರ್ಯಾಕ್ಟ್ ಮಾಡಿಸುತ್ತಿದ್ದ ವಿಜಯ್ಕುಮಾರ್ ಗಾರೆ ಕೆಲಸಕ್ಕಾಗಿ ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಎಂಬುವವರನ್ನು ಕರೆ ತಂದಿದ್ದ.
ಆದರೆ, ವಿಜಯಕುಮಾರ್ ಹಾಕಿಕೊಳ್ಳುತ್ತಿದ್ದ ಚಿನ್ನಾಭರಣಗಳ ಮೇಲೆ ವಿಕ್ರಂ ಹಾಗೂ ಸಚಿನ್ ಕಣ್ಣಿಟ್ಟಿದ್ದರು. ನಿನ್ನೆ ರಾತ್ರಿ ವಿಜಯಕುಮಾರ್ಗೆ ನಮಗೆ ಹುಷಾರಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವಿಕ್ರಂ ಮತ್ತು ಸಚಿನ್ ಕರೆ ಮಾಡಿದ್ದಾರೆ. ವಿಜಯಕುಮಾರ್ ಕಟ್ಟಡದ ಬಳಿ ಬರುತ್ತಿದ್ದಂತೆ ಕಬ್ಬಿಣ ರಾಡ್ ಮತ್ತು ಸಿಲಿಂಡರ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ವಿಜಯ್ಕುಮಾರ್ ಮೈಮೇಲಿದ್ದ ಒಂದು ಚಿನ್ನದ ಸರ, ಮೂರು ಉಂಗುರ, ಮೊಬೈಲ್ ಹಾಗೂ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.