ಹಾವೇರಿ: ಆರ್ ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು ಪೊಲೀಸರನ್ನು ಎತ್ತಂಗಡಿ ಮಾಡುವುದು ಸರಿಯಲ್ಲ. ಬದಲಾಗಿ ಸಿಎಂ, ಡಿಸಿಎಂ, ಸಚಿವರು ರಾಜೀನಾಮೆ ನೀಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಇದೊಂದು ಬುದ್ದಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ. ಇಂತಹ ಸರ್ಕಾರ ನೋಡಿರಲಿಲ್ಲ. ಬುದ್ದಿಗೇಡಿ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ ಸಿಬಿ ಮ್ಯಾಚ್ ಗೆದ್ದ ದಿನ ರಾತ್ರಿಯಿಡೀ ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ಅದಕ್ಕೆ ಪೊಲೀಸರು ಬಂದೋಬಸ್ತ್ ನೀಡಿದ್ದಾರೆ. ಬೆಳಗ್ಗೆ ತರಾತುರಿಯಲ್ಲಿ ವಿಜಯೋತ್ಸವ ಹಮ್ಮಿಕೊಂಡಿದ್ದು, ಪೊಲೀಸರು ಯಾವ ರೀತಿ ಭದ್ರತೆ ನೀಡಬೇಕು? ಇವರೇನು ಒಲಿಂಪಿಕ್ ಗೆದ್ದು ಬಂದಿದ್ದಾರಾ? ಆಯೋಜಕರು ಸಹ ಬೇಜವಾಬ್ದಾರಿ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದು ಈ ಅನಾಹುತಕ್ಕೆ ಕಾರಣ. ಈ ಸರ್ಕಾರವು ರಾಜ್ಯದಲ್ಲಿ ಆಡಳಿ ನಡೆಸಲು ಅರ್ಹತೆ ಕಳೆದುಕೊಂಡಿದೆ. ಇಡೀ ಕಾರ್ಯಕ್ರಮ ಗೊಂದಲಮಯವಾಗಿತ್ತು. ಅವರ ಚೇಲಾಗಳೇ ವೇದಿಕೆಯಲ್ಲಿದ್ದರು. ಪೊಲೀಸರನ್ನು ಎತ್ತಂಗಡಿ ಮಾಡುದಕ್ಕಿಂತ ಪ್ರಕರಣಕ್ಕೆ ಸಚಿವರು, ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹೊಣೆ ಎಂದು ಆರೋಪಿಸಿದರು.
ಕ್ರಿಡಾಂಗಣದ ಹೊರಗಡೆ ಸಾವಿನ ಸುದ್ದಿ ಬಂದರೂ ಸಹ ಕ್ರೀಡಾಂಗಣದ ಒಳಗೆ ಕಾರ್ಯಕ್ರಮ ಮುಂದುವರೆಸಿದ್ದಾರೆ. ಒಂದುಕಡೆ ವಿಜಯೋತ್ಸವ, ಇನ್ನೊಂದು ಶವಯಾತ್ರೆ ಮಾಡಿದ್ದಾರೆ. ಇದೊಂದು ಸರ್ಕಾರನಾ? ರಾಜ್ಯದಲ್ಲಿ ಕೋಮುಲಭೆ, ಅಪಹರಣ, ಗಲಾಟೆ ಕೊಲೆ ಪ್ರಕರಣಗಳು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.