ಬೆಂಗಳೂರು: ಇಲ್ಲಿಯ ಮಾಗಡಿ ರಸ್ತೆಯಲ್ಲಿನ ಜಿ.ಟಿ ಮಾಲ್ ಗೆ (GT Mall) ಕಲ್ಕಿ ಸಿನಿಮಾ ನೋಡಲು ಬಂದಿದ್ದ ರೈತ ಪಂಚೆ ಉಟ್ಟಿದ್ದಾರೆಂದು ಸಿಬ್ಬಂದಿ ಒಳಗೆ ಬಿಡದೆ ಅವಮಾನಿಸಿದ್ದರು. ಇದಕ್ಕೆ ನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಆ ರೈತರನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತವರ ತಂಡ ಅದೇ ಮಾಲ್ ನವರಿಂದ ಸನ್ಮಾನ ಮಾಡಿಸಿ ಗೌರವಿಸಿದೆ.
ನಿನ್ನೆ ದಿನ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದ ಎಂಬ ಕಾರಣಕ್ಕೆ ಬೆಂಗಳೂರಿನ “ಜಿ.ಟಿ. ಮಾಲ್” ಒಳಗೆ ಬಿಡದೆ, ಸಿಬ್ಬಂದಿ ಅವಮಾನ ಮಾಡಿದ್ದರು. ಈಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್ ನಿಂದಲೇ ಸನ್ಮಾನ ಮಾಡಲಾಗಿದೆ. ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿಸಲಾಗಿದೆ. ಅಲ್ಲದೇ, ಮಾಲ್ ಇನ್ಚಾರ್ಜ್ ಸುರೇಶ್ ಎಂಬುವವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.
ರೈತ ಫಕೀರಪ್ಪ ಪಂಚೆ ಧರಿಸಿಯೇ ಮಾಲ್ ಪ್ರವೇಶಿಸಿದ್ದಾರೆ. ರೈತನನ್ನು ಅವಮಾನಿಸಿದಕ್ಕೆ ಕನ್ನಡಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಲ್ ಇನ್ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಬಗ್ಗಿರಲಿಲ್ಲ. ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಈಗ ಮಾಲ್ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದ್ದಾರೆ.

ಈ ಘಟನೆಗೆ ಸಚಿವ ಕೃಷ್ಣಭೈರೇಗೌಡ ಕೂಡ ಪ್ರತಿಕ್ರಿಯೆ ನೀಡಿದ್ದರು. ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್ಸೆಟ್. ಜಿ.ಟಿ.ಮಾಲ್ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ? ದುರಹಂಕಾರದಿಂದ ಮಾಡುತ್ತಿದ್ದಾರೋ? ಇದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಾಡಿನೆಲ್ಲೆಡೆ ಈ ಘಟನೆ ಕುರಿತು ಆಕ್ರೋಶ ವ್ಯಕ್ತವಾಗಿತ್ತು.