ಚಿಕ್ಕಮಗಳೂರು: ಮೆಸ್ಕಾಂ ಬಿಲ್ ಕಂಡು ರೈತರೊಬ್ಬರು ಕಂಗಾಲಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎಂಬ ರೈತರಿಗೆ ಬರೋಬ್ಬರಿ 3,20,076 ರೂ. ಬಿಲ್ ಬಂದಿದೆ. 10 ಎಚ್ಪಿ ಮೋಟರ್ ಬಳಕೆಗೆ ಮೆಸ್ಕಾಂ ಇಷ್ಟೊಂದು ಬಿಲ್ ನೀಡಿದೆ. 13 ವರ್ಷ 4 ತಿಂಗಳ ನಂತರ 3 ಲಕ್ಷಕ್ಕೂ ಹೆಚ್ಚು ರೂಪಾಯಿ ಬಿಲ್ ನೀಡಿದೆ.
ಕೃಷಿ ಉದ್ದೇಶಕ್ಕೆ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭದಿಂದಲೂ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ಇದೆ. ಆದರೆ, ಈಗ ಏಕಾಏಕಿ ಮೆಸ್ಕಾಂ ಬಿಲ್ ನೀಡಿದೆ.
ಮೆಸ್ಕಾಂ ಅಧಿಕಾರಿಗಳು ಹೇಳುವುದೇನು?
ರೈತನಿಗೆ ಬರೋಬ್ಬರಿ ವಿದ್ಯುತ್ ಬಿಲ್ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಸ್ಕಾಂ ಅಧಿಕಾರಿಗಳು, ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, 13 ವರ್ಷಕ್ಕೂ ಹೆಚ್ಚು ಕಾಲ ಬಿಲ್ ನೀಡದೆ ಈಗ ಏಕಾಏಕಿ ಬಿಲ್ ನೀಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ಬಿಲ್ ನೋಡಿ ರೈತ ಉಮೇಶ್ ಕಂಗಾಲಾಗಿದ್ದಾರೆ. 15 ದಿನಗಳ ಒಳಗೆ ಹಣ ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಬಿಲ್ ಪಾವತಿ ಮಾಡದಿದ್ದರೆ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ನೀಡಲಾಗಿದೆ.
ವಿದ್ಯುತ್ ಬಿಲ್ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿ ಮಾಡಬೇಕು. ಇಲ್ಲವಾದರೆ ಗ್ರಾಹಕರಿಂದಲೇ ಬಿಲ್ ವಸೂಲಿ ಮಾಡಲು ಅವಕಾಶ ನೀಡಬೇಕು ಎಂದು ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ವರದಿಯನ್ನು ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ಅಲ್ಲಗಳದಿದ್ದು, ಆ ರೀತಿ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಹೇಳಿವೆ.