ಕನ್ನಡವನ್ನೇ ಉಸಿರಾಗಿ ಜೀವಿಸಿ, ಕನ್ನಡಕ್ಕಾಗಿ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿ, ಕನ್ನಡದ ಕಂಪು ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡಿದ ಚಳವಳಿಗಾರರಲ್ಲಿ ಮ.ರಾಮೂರ್ತಿಯವರಿಗೆ ಅಗ್ರಗಣ್ಯ ಸ್ಥಾನವಿದೆ. ನಾಡದೇವಿ ತಾಯಿ ಭುವನೇಶ್ವರಿಯ ಸಿಂಧೂರವನ್ನೇ ಕನ್ನಡ ಮನಸುಗಳ ಪ್ರತಿಬಿಂಬವಾಗಿಸಿದ ಮ. ರಾಮಮೂರ್ತಿಯವರು ಕೆಂಪು-ಹಳದಿ ಬಣ್ಣದ ನಾಡ ಬಾವುಟ ಸೃಷ್ಟಿಸಿದ್ದು ಇತಿಹಾಸ. ಇಂಥಾ ಕನ್ನಡ ಡಿಂಡಿಮ ಬಾರಿಸಿದ ಮ.ರಾಮಮೂರ್ತಿಯವರ ಚಳವಳಿಯ ಹಾದಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತು ಪ್ರೇರಣಯ ಪಂಜು ಹೊತ್ತಿಸಿದವರು ಬೇರಾರೂ ಅಲ್ಲಾ ಅದು ಅವರ ಧರ್ಮಪತ್ನಿ ಕಮಲಮ್ಮನವರು. ಕನ್ನಡ ಹಣತೆ ಇಂದು ಪರಂಜ್ಯೋತಿಯಾಗಿ ಬೆಳಗಲು ಕಾರಣೀಕರ್ತರೇ ಈ ಕಮಲಮ್ಮ..ಅಂಥಾ ಅಪೂರ್ವ ಚೇತನವಿಂದು ನಮ್ಮೆಲ್ಲರನ್ನು ಅಗಲಿದೆ. ಶತಮಾನದ ತುಂಬು ಜೀವನ ನಡೆಸಿದ ಹಿರಿಯ ಜೀವ ಇಂದು ಬಾರದೂರಿಗೆ ಪಯಣಿಸಿದೆ. ಈ ಮೂಲಕ ಕನ್ನಡದ ಕಟ್ಟಾಳುವೊಬ್ಬರ ಯುಗಾಂತ್ಯವಾಗಿದೆ.

ಮ.ರಾಮಮೂರ್ತಿ. 1960ರ ದಶಕದಲ್ಲಿ ಬೆಂಗಳೂರು ಅನ್ಯ ಭಾಷಿಕರ ಕಪಿಮುಷ್ಠಿಗೆ ಜಾರುತ್ತಿದ್ದ ಕಾಲಮಾನ. ಅಂದೇ ಭವ್ಯ ಬೆಂಗಳೂರಿನ ಭವಿಷ್ಯ ಅರಿತಿದ್ದ ಚಿಂತಕ, ಸಾಹಿತಿ, ಪತ್ರಕರ್ತ, ಕನ್ನಡ ಚಳವಳಿಗಾರ ಮ ರಾಮಮೂರ್ತಿ, ಸಮಾನ ಮನಸ್ತರೊಟ್ಟಿಗೆ ಬೆರೆತು ಹೊಸದೊಂದು ಆಂದೋಲನದ ಕಿಚ್ಚು ಹೊತ್ತಿಸಿದ್ರು. ತಂದೆಯಿಂದ ಬಳುವಳಿಯಾಗಿ ಬಂದಿದ್ದ ವೀರಕೇಸರಿ ಪತ್ರಿಕೆ ಮೂಲಕ ಕನ್ನಡದ ಸಾಹಿತ್ಯ ಕೃಷಿಯೊಟ್ಟಿಗೆ ಸ್ವಾಭಿಮಾನದ ಜ್ವಾಲೆ ಸೃಷ್ಟಿಸಿದ ರಾಮಮೂರ್ತಿ, ಬೆಂಗಳೂರನ್ನು ಕನ್ನಡಮಯವಾಗಿಸಿದ ವೀರ ಸೇನಾನಿ.
ಕನ್ನಡ ಬಾವುಟ ಹರಿಕಾರನ ಹೆಜ್ಜೆಗೆ, ಹೆಜ್ಜೆಯಾದ ಪತ್ನಿ
1918ರಲ್ಲಿ ನಂಜನಗೂಡಿನಲ್ಲಿ ಜನಿಸಿದ ಮ.ರಾಮಮೂರ್ತಿ, ವೈದಿಕ ಕುಟುಂಬದ ವಾತಾವರಣದಲ್ಲಿ ಬೆಳೆದವರು. ತಂದೆ ಸ್ವಾತಂತ್ರ ಹೋರಾಟಗಾರ ಸೀತಾರಾಮ ಶಾಸ್ತ್ರಿ ಹಾಗೂ ತಾಯಿ ಸುಬ್ಬಮ್ಮನವರ ಸಂಸ್ಕೃತಿ ಮತ್ತು ಸಂಸ್ಕೃತದ ಅಚ್ಚಿನಲ್ಲಿ ಅರಳಿದವರು. ಮುಂದೆ ವೀರಕೇಸರಿ ಪತ್ರಿಕೆ ಮೂಲಕ ಕನ್ನಡ ಕಟ್ಟೋ ಕಾಯಕ ಮಾಡಿದ ರಾಮಮೂರ್ತಿಯವರ ಆಂದೋಲನದ ಹಾದಿಯ ಪ್ರತಿ ಹೆಜ್ಜೆಗೆ ಹೆಜ್ಜೆಯಾದವರು ಕಮಲಮ್ಮ.
ಮೈಸೂರು ಸಂಸ್ಥಾನದಿಂದ ಬೇರ್ಪಟ್ಟು ಕರ್ನಾಟಕ ರಾಜ್ಯವಾಗಿ ಉದಯಿಸಿದ ನಾಡಿಗೆ ಕೆಂಪು-ಹಳದಿಯ ಬಾವುಟ ನೀಡಿದ ಕೀರ್ತಿಯೂ ರಾಮಮೂರ್ತಿಯವರದ್ದು. ಕನ್ನಡಿಗರಿಂದು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡ ಬಾವುಟವನ್ನು ರೂಪಿಸಿದ ರಾಮಮೂರ್ತಿಯವರು ಅಕಾಲಿಕ ಮೃತ್ಯುವಿಗೆ ತುತ್ತಾಗಿದ್ದು ವಿಧಿವಿಪರ್ಯಾಸ. ತಮ್ಮಿಬ್ಬರು ಮಕ್ಕಳೊಂದಿಗೆ ಕಾಲನ ಕರೆಗೆ ಓಗೊಟ್ಟ ರಾಮಮೂರ್ತಿಯವರ ಹೋರಾಟದ ಬದುಕು ಅನುಕರಣೀಯ. ಇಂಥಾ ರಾಮೂರ್ತಿಯವರ ಅಗಲಿಕೆ ಬಳಿಕ ಏಕಾಂಗಿಯಾಗೇ ಜೀವಿಸಿದ ಕಮಲಮ್ಮ ತಮ್ಮ ಅಂತಿಮ ಕಾಲದವರೆಗೂ ಕನ್ನಡದ ಕಾಳಜಿ ಮರೆತವರಲ್ಲ. ಇಂಥಾ ಅಪರೂಪದ ಚೈತನ್ಯವಿಂದು ಚಿರನಿದ್ರೆಗೆ ಜಾರಿಗೆ. 100 ವರ್ಷಗಳ ತಮ್ಮ ತುಂಬಿ ಜೀವನದಲ್ಲಿ ಕನ್ನಡವನ್ನೇ ಉಸಿರಿಸಿದ ಹಿರಿಯ ಜೀವ ಬಾರದೂರಿಗೆ ಪಯಣಿಸಿದೆ. ಆದ್ರೆ ಮ ರಾಮಮೂರ್ತಿಯವರ ಬೆನ್ನಿಗೆ ನಿಂತು ಕನ್ನಡ ಕಟ್ಟಿದ ಎಲೆಮರೆಯ ಕಾಯಿ ಅಂಥಾ ಕಮಲಮ್ಮನವರಿಗೆ ಸಮಸ್ತ ಕರುನಾಡು ಇವತ್ತು ಭಾವಪೂರ್ಣ ವಿದಾಯ ಸಲ್ಲಿಸಲೇಬೇಕು. ಈ ಮೂಲಕ ಕನ್ನಡಕ್ಕೆ ತನ್ನ ಹೆಮ್ಮೆ ತಂದುಕೊಟ್ಟ ದಂಪತಿಗಳಿಗೆ ಅಕ್ಷರ ನಮನ ಸಮರ್ಪಿಸಲೇಬೇಕು.