ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ (Shirur landslide) ತನ್ನವರನ್ನೆಲ್ಲ ಕಳೆದುಕೊಂಡಿದ್ದ ಶ್ವಾನ ಈಗ ಪೊಲೀಸ್ ಇಲಾಖೆ (Police Department) ಸೇರಿದೆ.
ಈ ನಾಯಿಯನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಇದನ್ನು ದತ್ತು ಪಡೆದಿದ್ದರು. ಇಂದು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ 5 ಕಿಮೀ ಮ್ಯಾರಾಥಾನ್ (Marathon) ಓಟದಲ್ಲಿ ಈ ಶ್ವಾನ ಬೆಳ್ಳಿ ಪದಕ ಕೂಡ ಪಡೆದಿದೆ.
ಶಿರೂರಿನ ಗುಡ್ಡ ಕುಸಿತ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಕಳೆದ 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಸಾವನ್ನಪ್ಪಿದ್ದರು. ಹೆದ್ದಾರಿ ಪಕ್ಕದಲ್ಲೇ ಲಕ್ಷ್ಮಣ್ ನಾಯ್ಕ ಎನ್ನುವವರು ಹೋಟೆಲ್ ನಡೆಸುತ್ತಿದ್ದು ಗುಡ್ಡ ಕುಸಿದು ಮಣ್ಣು ಹೋಟೆಲ್ ಮೇಲೆ ಬಿದ್ದ ಪರಿಣಾಮ ಆತ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬದವರು ಸಾಕಿದ್ದ ಶ್ವಾನ ಅನಾಥವಾಗಿತ್ತು. ಕಾರ್ಯಾಚರಣೆ ವೇಳೆ ಪ್ರತಿದಿನ ಬಂದು ಮಾಲೀಕನ ಬರುವಿಕೆಗಾಗಿ ಕಾಯುತ್ತಿತ್ತು.
ಇದನ್ನು ಗಮನಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್, ಶ್ವಾನವನ್ನ ದತ್ತು ಪಡೆದು ಅದನ್ನು ಸಾಕಿದ್ದರು. ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಇದೇ ಶ್ವಾನಕ್ಕೆ ತರಬೇತಿ ನೀಡಿದ್ದರು. ಸದ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈ ಶ್ವಾನ ಎಲ್ಲರ ಗಮನ ಸೆಳೆದಿದೆ. ಇಂದು ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ ಮ್ಯಾರಾಥಾನ್ ಓಟದಲ್ಲಿ 5 ಕಿಲೋ ಮೀಟರ್ ಸಂಚರಿಸಿ ಬೆಳ್ಳಿ ಪದಕ ಪಡೆದಿದೆ.