ನವದೆಹಲಿ: ಮಹಾಭಾರತದ ಚಕ್ರವ್ಯೂಹದ ರೀತಿಯಲ್ಲಿ ಈಗ ದೇಶದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಈ ದೇಶವನ್ನು ಬಂಧಿಸಿರುವ ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ. ಒಂದು ಅಂಶವು ಆರ್ಥಿಕ ಶಕ್ತಿ. ಇನ್ನೊಂದು ಕೇಂದ್ರ ಸಂಸ್ಥೆಗಳು. ಮೂರನೇಯದು ರಾಜಕೀಯ ಸಂಸ್ಥೆಗಳು. ಇವು ಚಕ್ರವ್ಯೂಹದ ಹೃದಯಭಾಗದಲ್ಲಿ ಇದ್ದು, ದೇಶವನ್ನು ನಾಶಗೊಳಿಸಿದೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್, ದೇಶದಲ್ಲಿನ ಉದ್ಯಮಗಳ ಏಕಸ್ವಾಮ್ಯ ಬಲಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಈ ಶಕ್ತಿಗಳು ಭಯದ ವಾತಾವರಣ ನಿರ್ಮಿಸಿವೆ. ಇದು ದೇಶದ ತುಂಬೆಲ್ಲ ವ್ಯಾಪಿಸಿದೆ. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಲು ಬಯಸಿದರೆ, ದೊಡ್ಡ ಸಮಸ್ಯೆ ಎದುರಾಗುತ್ತದೆ. ಈ ಭಯವು ದೇಶಾದ್ಯಂತ ಹರಡಿದೆ ಎಂದು ಆರೋಪಿಸಿದರು.
ಹಿಂದಿನ ಭಾಷಣದಲ್ಲಿ ಶಿವ ಅಹಿಂಸೆಯ ಪರಿಕಲ್ಪನೆ, ತ್ರಿಶೂಲವನ್ನು ಶಿವನ ಹಿಂದೆ ಇರಿಸಲಾಗಿದೆಯೇ ವಿನಾ ಆತನ ಕೈಗಳಲ್ಲಿ ಇಲ್ಲ. ಶಿವನ ಕೊರಳಲ್ಲಿ ಇರುವ ಹಾವಿನ ಕುರಿತು ಹೇಳಿದ್ದೆ. ಪ್ರೀತಿಯನ್ನು ಹರಡುವ ಮತ್ತು ಎಲ್ಲರಲ್ಲಿಯೂ ಅಹಿಂಸೆಯನ್ನು ಬಿತ್ತುವ ಅಭಯ ಮುದ್ರೆ ಪರಿಕಲ್ಪನೆ ಬಗ್ಗೆಯೂ ಹೇಳಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಆರು ಮಂದಿ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಸಿಲುಕಿಸಿ, ಆತನನ್ನು ಕೊಂದಿದ್ದರು. ನಾನು ಸ್ವಲ್ಪ ಸಂಶೋಧನೆ ಮಾಡಿದ್ದು, ಚಕ್ರವ್ಯೂಹಕ್ಕೆ ಪದ್ಮವ್ಯೂಹ ಎಂದೂ ಕರೆಯುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಚಕ್ರವ್ಯೂಹವು ಕಮಲದ ಆಕೃತಿಯಲ್ಲಿ ಇರುತ್ತದೆ. 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹವನ್ನು ರಚಿಸಲಾಗಿದೆ. ಅದೂ ಕೂಡ ಕಮಲದ ಸ್ವರೂಪದಲ್ಲಿದೆ. ಪ್ರಧಾನಿ ಅದರ ಸಂಕೇತವನ್ನು ಎದೆಯ ಮೇಲೆ ಇರಿಸಿದ್ದಾರೆ. ಅಭಿಮನ್ಯುವಿಗೆ ಮಾಡಿದ್ದನ್ನು ಇಂದು ಇಡೀ ಭಾರತ- ಯುವಜನರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೂ ಮಾಡಲಾಗುತ್ತಿದೆ. ಅಂದು ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಇದ್ದಂತೆ, ಇಂದು ಕೂಡ ‘ಚಕ್ರವ್ಯೂಹ’ದ ಕೇಂದ್ರದಲ್ಲಿ ಆರು ವ್ಯಕ್ತಿಗಳಿದ್ದಾರೆ- ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಎಂದು ವ್ಯಂಗ್ಯವಾಡಿದ್ದಾರೆ.